ಗುಲ್ಬರ್ಗ: ಇಲ್ಲಿನ ರೈಲು ನಿಲ್ದಾಣದಲ್ಲಿ ಅ.16ರಂದು ನಿಂತಿದ್ದ `ಫಲಕ್ನಾಮ~ ಪ್ಯಾಸೆಂಜರ್ ರೈಲಿನ ಬೋಗಿಯು ಬೆಂಕಿಗೆ ಆಹುತಿಯಾಗಲು ಇದರೊಳಗೆ ಪ್ರೇಮಿಗಳು ಪೆಟ್ರೋಲ್ ಸುರಿದು ಕೊಂಡು ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಾರಣ ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ.
ಗುಲ್ಬರ್ಗದ ಹನುಮಾನ್ ನಗರದ ನಿವಾಸಿ ವರ್ಷಾ ಶಂಕರ್ ಮಹಾರೂಕರ್ (17) ಮತ್ತು ವಿಶಾಲ ನಗರದ ಶರಣು ಬಸವಲಿಂಗಪ್ಪ ಶಹಾಬಾದಿ (23) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇವರ ಅಂತರ್ಜಾತಿ ವಿವಾಹಕ್ಕೆ ಮನೆಯವರು ಒಪ್ಪಿರಲಿಲ್ಲ. ಹೀಗಾಗಿ ಗುಲ್ಬರ್ಗದಲ್ಲಿ 4 ತಾಸು ನಿಲ್ಲುವ ಹೈದರಾಬಾದ್- ಸೊಲ್ಲಾಪುರ ರೈಲಿನ ಬೋಗಿಯೊಳಗೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಇನ್ಸ್ಪೆಕ್ಟರ್ ಶಿವನಗೌಡ ಪಾಟೀಲ್ ತಿಳಿಸಿದ್ದಾರೆ.
ಟಂಟಂ ಚಾಲಕನಾದ ಶರಣು ಪೆಟ್ರೋಲ್ ಖರೀದಿಸಿ ರೈಲು ನಿಲ್ದಾಣಕ್ಕೆ ಆಗಮಿಸಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ವರ್ಷಾ ಜೊತೆ ಬೋಗಿಯೊಳಗೆ ಹೋಗಿ ಬಾಗಿಲು ಹಾಕಿರುವುದನ್ನು ಕಂಡ ಸಾಕ್ಷಿಗಳಿವೆ ಎಂದು ಅವರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.