ಚಿಕ್ಕಮಗಳೂರು: `ಗ್ರಾಮೀಣ ಭಾಗದ ಸಂಸ್ಕೃತಿಯನ್ನು ಯುವಕರು ಮುಂದುವರಿಸಿಕೊಂಡು ಹೋಗಬೇಕು~ ಎಂದು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕಿ ಮೋಟಮ್ಮ ಕರೆ ನೀಡಿದರು.
ತಾಲ್ಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ಭಾನುವಾರ ಗ್ರಾಮೀಣ ಸಂಸ್ಕೃತಿ ಸಮ್ಮೇಳನದ ಗ್ರಾಮೀಣ ಕ್ರೀಡಾಕೂಟ ಮತ್ತು ಬಯಲು ಚಿತ್ರಾಲಯಕ್ಕೆ ರಾಗಿ ಬೀಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಸಾಂಪ್ರದಾಯಿಕ ಮದುವೆಗಳು ಸಹ ಆಡಂಬರವಾಗಿ ಮಾರ್ಪಟ್ಟಿರುವುದು ದುರದೃಷ್ಟಕರ. ಹಿಂದಿನ ಕಾಲದಲ್ಲಿ ಮಹಿಳೆಯರು ವಿದ್ಯಾಭ್ಯಾಸ ಇಲ್ಲದಿದ್ದರೂ ಪದಕಟ್ಟಿ ಹಾಡುತ್ತಿದ್ದರು. ಜನಪದಗೀತೆ, ಸಾಹಿತ್ಯ ಅನಕ್ಷರಸ್ಥ ಹೆಣ್ಣುಮಕ್ಕಳೇ ಬೆಳೆಸಿದ್ದು ಎಂದರು.
ಸಾಹಿತಿ ಚಟ್ನಳ್ಳಿ ಮಹೇಶ್ ಬದುಕು ಮತ್ತು ಗ್ರಾಮೀಣ ಚಟುವಟಿಕೆ ಕುರಿತು ಉಪನ್ಯಾಸ ನೀಡಿ, ಹಿಂದಿನ ಕಾಲದ ಸಾಂಪ್ರದಾಯಿಕ ವಸ್ತುಗಳು ಇಂದಿನ ಯುವ ಪೀಳಿಗೆಗೆ ವಸ್ತು ಸಂಗ್ರಹಾಲಯದಲ್ಲಿ ತೋರಿಸಬೇಕಾಗಿದೆ ಎಂದು ವಿಷಾದಿಸಿದರು.
ಗ್ರಾಮೀಣ ಭಾಗದಲ್ಲಿ ದುಶ್ಚಟಗಳಿಗೆ ದಾಸರಾಗದೆ ಮದ್ಯಪಾನ, ಧೂಮಪಾನ ಮುಕ್ತ ಗ್ರಾಮವೆಂದು ನಾಮಫಲಕ ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಧಾನಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಯುವಕರು ಗ್ರಾಮಗಳನ್ನು ತೊರೆದು ಉದ್ಯೋಗಕ್ಕಾಗಿ ಪಟ್ಟಣ ಸೇರದೆ ಗ್ರಾಮಗಳಲ್ಲಿಯೇ ತಮ್ಮ ಬದುಕು ರೂಪಿಸಿಕೊಳ್ಳಬೇಕು. ಮಹಿಳೆಯರು ಆಧುನಿಕ ಯುಗದಲ್ಲಿ ಗ್ರಾಮೀಣ ಸಂಸ್ಕೃತಿಯನ್ನು ಮರೆಯದೆ ಮುಂದುವರಿಸಬೇಕು ಎಂದು ಸಲಹೆ ನೀಡಿದರು.
ಬಸವ ಮಂದಿರದ ಜಯಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಗುರುಶಾಂತಪ್ಪ, ರೇಣುಕಾರಾಧ್ಯ, ರಘು, ಮಂಜುನಾಥ್ ಹಾಗೂ ಗ್ರಾಮದ ಮುಖಂಡರಾದ ಕ್ಯಾತನಬೀಡು ರವೀಶ್, ಲೋಕೇಶ್ ಇನ್ನಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.