ADVERTISEMENT

ಛಲವಾದಿ ಮಹಾಸಭಾ ಅಧ್ಯಕ್ಷರ ವಿರುದ್ಧ ಸ್ವಾಮೀಜಿ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜೂನ್ 2011, 19:30 IST
Last Updated 6 ಜೂನ್ 2011, 19:30 IST

ಚಿತ್ರದುರ್ಗ: ಛಲವಾದಿ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಎಚ್.ಕೆ. ಬಸವರಾಜ್ ಛಲವಾದಿ ಹೆಸರಿನಡಿ ಸರ್ಕಾರದ ಅನುದಾನ ಪಡೆದು ಬೌದ್ಧ ವಿಹಾರ ಮಾಡಲು ಮುಂದಾಗಿದ್ದಾರೆ ಎಂದು ಛಲವಾದಿ ಗುರುಪೀಠದ ಬಸವನಾಗೀದೇವ ಸ್ವಾಮೀಜಿ ಆರೋಪಿಸಿದರು.

ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಿರುವ ಬಸವರಾಜ್, ಛಲವಾದಿ ಹೆಸರಿನಡಿ ಪಡೆದಿರುವ ಅನುದಾನವನ್ನು ಸಮಾಜದ ಅಭಿವೃದ್ಧಿಗೆ ಬಳಸದೇ ಸಮಾಜವನ್ನು ವಂಚಿಸಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಜೂನ್ 10ರಂದು ಛಲವಾದಿ ಭವನದ ಅಡಿಗಲ್ಲು ಸಮಾರಂಭ ಹಾಗೂ ರಾಜ್ಯ ಛಲವಾದಿ ಜನಾಂಗದ 2ನೇ ಮಹಾ ಸಮಾವೇಶ ಆಯೋಜಿಸಿದ್ದು, ಈ ಬಗ್ಗೆ ಮಹಾಸಭಾದ ಪೋಷಕರಲ್ಲಿ ಹಾಗೂ ಮುಖಂಡರಲ್ಲಿ ಚರ್ಚೆ ನಡೆಸಿಲ್ಲ ಹಾಗೂ ಕಾರ್ಯಕ್ರಮಕ್ಕೆ ಆಹ್ವಾನವೂ ನೀಡಿಲ್ಲ ಎಂದು ದೂರಿದರು.

ಸ್ವಂತ ಬೇಳೆ ಬೇಯಿಸಿಕೊಳ್ಳಲು ಸಮಾಜದ ಉನ್ನತ ಅಧಿಕಾರಿಗಳನ್ನು ಬೌದ್ಧಿಕವಾಗಿ ಹೈಜಾಕ್ ಮಾಡುತ್ತಿದ್ದಾರೆ. ಇವೆಲ್ಲಾ ಘಟನೆಗಳು ತಮಗೆ ಬೇಸರ ತಂದರೂ ನಡೆಯಲಿರುವ ಕಾರ್ಯಕ್ರಮಕ್ಕೆ ವಿರೋಧ ಮಾಡುತ್ತಿಲ್ಲ ಹಾಗೂ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ತಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟನೆ ನೀಡಿದರು. ಬಸವರಾಜ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡುವಂತೆ ಕಳೆದ ಜೂನ್ 1ರಂದು ಸಮುದಾಯದ ಮುಖಂಡರು ಬೆಂಗಳೂರಿಗೆ ನಿಯೋಗ ತೆರಳಿ ಮನವಿ ಸಲ್ಲಿಸಲಾಗಿದೆ ಎಂದರು.

ದಾವಣಗೆರೆಯಲ್ಲಿ ಛಲವಾದಿ ಸಮಾಜದ ಮಠಕ್ಕಾಗಿ ನೀಡಿದ್ದ ಡಿ.ಇಡಿ, ಬಿ.ಇಡಿ ಕಾಲೇಜನ್ನು ಸಹ ತಮ್ಮ ಸ್ವಂತ ಆಸ್ತಿಯಂತೆ ಮಾಡಿಕೊಂಡು, ತಮ್ಮ ಸಂಬಂಧಿಕರನ್ನೇ ಕಾಲೇಜು ಸಮಿತಿಗೆ ನೇಮಕ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.