ADVERTISEMENT

ಜಗತ್ತಿನ ಉಸಿರು ಜಾನಪದ: ಗೊರುಚ

​ಪ್ರಜಾವಾಣಿ ವಾರ್ತೆ
Published 9 ಜನವರಿ 2011, 6:35 IST
Last Updated 9 ಜನವರಿ 2011, 6:35 IST

ಜಗತ್ತಿನ ಉಸಿರು ಜಾನಪದ: ಗೊರುಚ
ಚಾಮರಾಜನಗರ: ‘ಜಾನಪದ ಸತ್ತರೆ ಜಗತ್ತಿಗೆ ಉಳಿಗಾಲವಿಲ್ಲ. ಅಧಿಕಾರ ನಡೆಸಲು ಜಾಣ್ಮೆಯೊಂದೇ ಆಧಾರವಲ್ಲ. ಪ್ರಜ್ಞೆ  ಇರಬೇಕು. ಪ್ರಜ್ಞಾಹೀನ ಜನಪ್ರತಿನಿಧಿಗಳು ಹಾಗೂ ಅಧಿಕಾರಶಾಹಿಯಿಂದ ಮೂಲ ಜಾನಪದ ಕಲಾವಿದರಿಗೆ ಅನಾಥಪ್ರಜ್ಞೆ ಕಾಡುತ್ತಿದೆ’ ಎಂದು ಸಮ್ಮೇಳನಾಧ್ಯಕ್ಷ ಗೊ.ರು. ಚನ್ನಬಸಪ್ಪ ವಿಶ್ಲೇಷಿಸಿದರು.

ನಗರದಲ್ಲಿ ಶನಿವಾರ ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದಿಂದ ಹಮ್ಮಿ ಕೊಂಡಿರುವ ರಾಜ್ಯಮಟ್ಟದ ಜಾನಪದ ಕಲಾವಿದರ 2ನೇ ಮಹಾಸಮ್ಮೇಳನದಲ್ಲಿ ಅವರು ಮಾತನಾಡಿದರು.

ಜಾನಪದ ಬದುಕು ಸ್ವಾರಸ್ಯಕರ, ವಸ್ತುನಿಷ್ಠ ಹಾಗೂ ಸರಳವಾದುದು. ಗುಲಾಬಿ ಕೊಟ್ಟು ಅಧಿಕಾರಿವರ್ಗದ ಮನಸೆಳೆ ಯುವ ಶಿಷ್ಟ ಕಲಾವಿದರಿದ್ದಾರೆ. ಮೂಲ ಕಲಾವಿದರಿಗೆ ಅಂಥ ಜಾಣ್ಮೆ ಇಲ್ಲ. ಹಾಗಾಗಿ, ಆಧುನಿಕತೆಯ ಬಿರುಗಾಳಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಮನಸ್ಸಿಗೆ ಶಾಂತಿ ಕೊಡುವ ಕಲಾ ಪ್ರಕಾರಗಳು ಉಳಿಯುವ ಕೆಲಸವಾಗಬೇಕಿದೆ ಎಂದು ಆಶಿಸಿದರು.

ಗ್ರಾಮೀಣರದು ಮುಗ್ಧ ಸ್ವಭಾವ. ನಗರದವರ ಕುತಂತ್ರಕ್ಕೆ ಅಧಿಕಾರಿಗಳು ಮರು ಳಾಗುತ್ತಾರೆ. ಶಿಷ್ಟ ಕಲಾವಿದರು ದಲ್ಲಾಳಿತನ ಮಾಡುತ್ತಿದ್ದಾರೆ. ಇಂಥ ಪ್ರವೃತ್ತಿಗೆ ಕಡಿವಾಣ ಬೀಳಬೇಕಿದೆ ಎಂದ ಅವರು, ರಾಜ್ಯದಲ್ಲಿ 134 ತೊಗಲುಗೊಂಬೆ ಕಲಾ ತಂಡಗಳಿದ್ದವು. ಈಗ ಅವುಗಳ ಸಂಖ್ಯೆ 45ಕ್ಕೆ ಇಳಿದಿದೆ. ಪ್ರೋತ್ಸಾ ಹದ ಕೊರತೆಯಿಂದ ಸತ್ತು ಹೋಗುತ್ತಿವೆ. ಕರ್ನಾಟಕ ಜಾನಪದ ಅಕಾಡೆಮಿಯಿಂದ ಅವರನ್ನು ಒಂದೆಡೆ ಸೇರಿಸಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲಾಗಿದೆ ಎಂದರು.

ಶಿಷ್ಟ ಕಲಾವಿದರು ಅಂಬಾರಿ ಇದ್ದಂತೆ. ‘ಆನೆ’ ಮೂಲ ಜಾನಪದ ಕಲಾವಿದರ ದ್ಯೋತಕ ಇದ್ದಂತೆ. ಆನೆ ಮೈಕೊಡವಿದರೆ ಅಂಬಾರಿ ಕೆಳಗೆ ಬೀಳುತ್ತದೆ ಎಂದು ಮಾರ್ವಿ ಕವಾಗಿ ನುಡಿದ ಅವರು, ಆಧುನಿಕತೆಯ ಬೆನ್ನುಹತ್ತಿದವರಿಗೆ ಜಾನಪದದ ತಿರುಳು ಅರ್ಥವಾಗುತ್ತಿಲ್ಲ ಎಂದು ವಿಷಾದಿಸಿದರು.

‘ದೇಶದಲ್ಲಿಯೇ ಪ್ರಥಮ ಬಾರಿಗೆ ಕರ್ನಾಟಕದಲ್ಲಿ ಜಾನಪದ ವಿವಿ ಸ್ಥಾಪನೆ ಯಾಗುತ್ತಿದೆ. ಗಡಿ ಜಿಲ್ಲೆಯಲ್ಲಿ ವಿವಿ ಸ್ಥಾಪನೆ ಬಗ್ಗೆ ನನ್ನಲ್ಲಿ ಭಿನ್ನಾಭಿಪ್ರಾಯ. ಆದರೆ, ಅಕಾ ಡೆಮಿಯ ಅಧ್ಯಕ್ಷನಾಗಿ ಮಧ್ಯಕರ್ನಾಟಕದ ಭಾಗದಲ್ಲಿ ಸ್ಥಾಪಿಸುವಂತೆ ಆಶಯ ವ್ಯಕ್ತಪಡಿಸುತ್ತೇನೆ’ ಎಂದರು.

ಅಖಿಲ ಕರ್ನಾಟಕ ಜಾನಪದ ಕಲಾವಿದರ ಒಕ್ಕೂಟದ ಅಧ್ಯಕ್ಷ ಡಾ.ವೀರೇಶ್ ಬಳ್ಳಾರಿ ಮಾತನಾಡಿ, ಜಾನಪದ ಕಲಾವಿದರಿಗೆ ಅನು ಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾಂಸ್ಕೃತಿಕ ನೀತಿ ಜಾರಿಯಾಗಬೇಕು ಎಂದು ಒತ್ತಾಯಿಸಿದರು.
ಜಾನಪದ ವಿವಿಯ ವಿಶೇಷ ಅಧಿಕಾರಿ ಡಾ.ಅಂಬಳಿಕೆ ಹಿರಿಯಣ್ಣ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ ಸಮ್ಮೇಳನಕ್ಕೆ ಚಾಲನೆ ನೀಡಿದರು. ಮಂಟೇಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುದೇವರಾಜೇ ಅರಸ್ ನೇತೃತ್ವವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಎಸ್. ಶಂಕರಪ್ಪ, ಡಾ.ದತ್ತೇಶ್, ಜೋಗಿಲ ಸಿದ್ದ ರಾಜು, ಹರದನಹಳ್ಳಿ ನಟರಾಜು, ಜಾನಪದ ವಿದ್ವಾಂಸ ವೀರಣ್ಣ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.