ಕಾರವಾರ: ದಿನನಿತ್ಯದ ವಿದ್ಯಮಾನಗಳನ್ನು ಕೇವಲ ರೇಖೆಯ ಮೂಲಕ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಳಿಸುವ ಶಕ್ತಿ ವ್ಯಂಗ್ಯಚಿತ್ರಕ್ಕಿದೆ ಎಂದು ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ ಅಭಿಪ್ರಾಯಪಟ್ಟರು.
ಕರ್ನಾಟಕ ಮಾಧ್ಯಮ ಅಕಾಡೆಮಿ, ಜಿಲ್ಲಾ ವಾರ್ತಾ ಇಲಾಖೆ ಹಾಗೂ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಗುರುವಾರ ನಗರದ ಕೋಡಿ ಭಾಗದಲ್ಲಿರುವ ವಿಜ್ಞಾನ ಕೇಂದ್ರದಲ್ಲಿ ನಡೆದ ‘ಮಾಧ್ಯಮಗಳಲ್ಲಿ ವ್ಯಂಗ್ಯಚಿತ್ರ ರಚನೆ ಹಾಗೂ ಪ್ರದರ್ಶನ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ವ್ಯಂಗ್ಯಚಿತ್ರಗಳನ್ನು ಗಹನವಾಗಿ ನೋಡಿದಾಗ ಅದು ಯಾವ ಅರ್ಥ ಧ್ವನಿಸುತ್ತದೆ ಎನ್ನುವುದು ಗೊತ್ತಾಗುತ್ತದೆ ಎಂದರು.
ಜಿ.ಪಂ. ಸಿಇಓ ವಿಜಯಮೋಹನರಾಜ್ ಮಾತನಾಡಿ, ಗಂಭೀರ ವಿಷಯ ವಸ್ತುಗಳು ವ್ಯಂಗ್ಯಚಿತ್ರಗಳಲ್ಲಿ ಮೂಡಿ ಬಂದಾಗ ಅದನ್ನು ನೋಡಿ ನಗುವುದರಿಂದ ಮನಸ್ಸಿಗೊಂದಿಷ್ಟು ಉಲ್ಲಾಸವೂ ಸಿಗುತ್ತದೆ ಎಂದರು.
ಹಿರಿಯ ವ್ಯಂಗ್ಯಚಿತ್ರಕಾರ ಎಚ್.ಬಿ. ಮಂಜುನಾಥ ಉಪನ್ಯಾಸ ನೀಡಿ, ಕೇವಲ ನಗಿಸುವುದು ಮಾತ್ರ ವ್ಯಂಗ್ಯಚಿತ್ರದ ಗುರಿಯಲ್ಲ. ರಚನಾತ್ಮಕ ಟೀಕೆಯೂ ಅಲ್ಲಿರುತ್ತದೆ ಎಂದರು.
ಹಿರಿಯ ಪತ್ರಕರ್ತ ಬಿ. ಶೀಲವಂತರ ಅಧ್ಯಕ್ಷತೆ ವಹಿಸಿದ್ದರು. ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಡಾ.ಬಿ.ಆರ್. ಮಮತಾ, ಗೃಹ ಸಚಿವರ ಆಪ್ತ ಕಾರ್ಯದರ್ಶಿ ಕೆಂಪೆಗೌಡ. ಟಿ.ಬಿ.ಹರಿಕಾಂತ, ವಾರ್ತಾಧಿಕಾರಿ ಮಂಜುನಾಥ ಸುಳೊಳ್ಳಿ ವೇದಿಕೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.