ಮದ್ದೂರು: ಮದುವೆ ದಿಬ್ಬಣದ ಲಾರಿಗೆ ಪೊಲೀಸ್ ಜೀಪು ಅಡ್ಡಹಾಕಿದ ಪರಿಣಾಮ ಲಾರಿ ಚರಂಡಿಗೆ ಉರುಳಿದ ಘಟನೆ ಪಟ್ಟಣದ ಎಲ್ಐಸಿ ಕಚೇರಿ ಬಳಿ ಬುಧವಾರ ನಡೆದಿದೆ. ಇದರಿಂದ ಕೆರಳಿದ ಗ್ರಾಮಸ್ಥರು, ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರಲ್ಲದೇ, ಎರಡು ಗಂಟೆಗೂ ಹೆಚ್ಚುಕಾಲ ಹೆದ್ದಾರಿ ತಡೆ ನಡೆಸಿದರು.
ಚನ್ನಪಟ್ಟಣ ತಾಲ್ಲೂಕಿನ ಮಾಚನಹಳ್ಳಿ ಗ್ರಾಮದ 150ಕ್ಕೂ ಹೆಚ್ಚು ಗ್ರಾಮಸ್ಥರು ಮಂಡ್ಯದಲ್ಲಿ ನಡೆಯುತ್ತಿದ್ದ ಮದುವೆಗೆ ಬರುತ್ತಿದ್ದರು.
ಮಧ್ಯಾಹ್ನ 3ಗಂಟೆ ಸಮಯದಲ್ಲಿ ಕೆಎಸ್ಆರ್ಟಿಸಿ ಬಸ್ನಿಲ್ದಾಣದ ಬಳಿ ಲಾರಿ ಬರುತ್ತಿದ್ದಂತೆ ಸಂಚಾರಿ ಪೇದೆಯೊಬ್ಬರು ಅಡ್ಡಗಟ್ಟಿದರು. ಚಾಲಕ ಲಾರಿಯನ್ನು ನಿಲ್ಲಿಸಲಿಲ್ಲ.
ಲಾರಿ ಬೆನ್ನಟ್ಟಿದ ಸಂಚಾರಿ ಜೀಪು ಎಲ್ಐಸಿ ಕಚೇರಿ ಬಳಿ ಅಡ್ಡಗಟ್ಟಿತು. ಇದರಿಂದ ನಿಯಂತ್ರಣ ಕಳೆದುಕೊಂಡ ಲಾರಿ ದೊಡ್ಡ ಚರಂಡಿಗೆ ಉರುಳಿತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಅಪಘಾತಕ್ಕೆ ಕಾರಣರಾದ ಪೊಲೀಸರ ವಿರುದ್ಧ ಘೋಷಣೆ ಮೊಳಗಿಸಿದರು. ಲಾರಿ ಅಡ್ಡಗಟ್ಟಿದ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದರು.
ಎರಡು ಗಂಟೆಗೂ ಹೆಚ್ಚುಕಾಲ ಹೆದ್ದಾರಿಯ ಎರಡು ಬದಿಯಲ್ಲೂ ಧರಣಿ ಕುಳಿತಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು.
ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಸಂಚಾರಿ ಪಿಎಸ್ಐ ಗೋಪಿನಾಥ್, ಪಿಎಸ್ಐ ಮಹೇಶ್ ಉದ್ರಿಕ್ತ ಗ್ರಾಮಸ್ಥರನ್ನು ಸಮಾಧಾನಪಡಿಸಿದರು. ತಪ್ಪು ಮಾಡಿದ ಪೊಲೀಸರ ವಿರುದ್ಧ ದೂರು ನೀಡಿದರೆ ಅವರ ಮೇಲೆ ಕ್ರಮ ಜರುಗಿಸುತ್ತೇವೆ ಎಂಬ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಸಮಾಧಾನಗೊಂಡು ಪ್ರತಿಭಟನೆಯನ್ನು ಹಿಂಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.