ADVERTISEMENT

ದುಷ್ಕರ್ಮಿಗಳಿಂದ ನಾಲೆಗೆ ಹಾನಿ: ಪೈರು ನಾಶ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 19:30 IST
Last Updated 18 ಅಕ್ಟೋಬರ್ 2011, 19:30 IST

ಹೊಳೆನರಸೀಪುರ: ತಾಲ್ಲೂಕಿನ ಹಳ್ಳಿಮೈಸೂರು ಹೋಬಳಿಗೆ ನೀರು ಒದಗಿಸಲು ನಿರ್ಮಿಸಿರುವ ಗುಡ್ಡೇನಹಳ್ಳಿ ಏತ ನೀರಾವರಿಯ ನಾಲೆಯ ಸೀಳುಗಾಲುವೆಯನ್ನು ಮಹದೇಶ್ವರ ಕಾಲೋನಿಯ ಕುರಿಕಾವಲು ಸಮೀಪ ಮಂಗಳವಾರ ದುಷ್ಕರ್ಮಿಗಳು ಒಡೆದಿದ್ದಾರೆ. ಇದರಿಂದ ಮುಖ್ಯನಾಲೆಯಲ್ಲಿ ಹರಿಯುವ ನೀರು ಸೀಳುನಾಲೆಯ ಕೆಳಭಾಗದ ಹೊಲಗಳಿಗೆ ನುಗ್ಗಿದೆ. 25 ಎಕರೆಯಲ್ಲಿ ಬೆಳೆದ ಜೋಳ, ಎಳ್ಳು, ಅವರೆ ಮುಂತಾದ ಬೆಳೆ ನಾಶವಾಗಿದೆ.

~ನಸುಕಿನಲ್ಲಿ ಜಮೀನಿಗೆ ನೀರು ನುಗ್ಗಿದ ಶಬ್ದ ಕೇಳಿ ಹೊರಗೆ ಬಂದು ನೋಡಿದರೆ ಬೆಳೆ ಮುಳುಗಿತ್ತು. ನಾಲೆ ಒಡೆದ ಜಾಗಕ್ಕೆ ಓಡಿ ಹೋಗಿ ಕಲ್ಲು ಮಣ್ಣು ಹಾಕಿದೆವು. ಬಳಿಕ ಅಧಿಕಾರಿಗಳಿಗೆ ಹೇಳಿ ನೀರು ನಿಲ್ಲಿಸಿದೆವು. ಆದರೆ, ನಾವೇ ನಾಲೆ ಒಡೆದಿದ್ದೇವೆ ಎಂದು ಈಗ ಆರೋಪಿಸುತ್ತಿದ್ದಾರೆ~ ಎಂದು ಗ್ರಾಮದ ರಾಜಪ್ಪ, ದೇವಯ್ಯ ತಿಳಿಸಿದ್ದಾರೆ.

`ನಾವು ಎಷ್ಟೇ ಕೇಳಿದರೂ ಹಳ್ಳಿಮೈಸೂರು ಉಪ ವಿಭಾಗದ ಎಂಜಿನಿಯರ್ ಒಪ್ಪುತ್ತಿಲ್ಲ. ನಮ್ಮ ಮೇಲೇ ಆರೋಪ ಮಾಡುತ್ತಿದ್ದಾರೆ. ಒಡೆದ ನಾಲೆಗೆ ನೀವೇ ಮರಳು ಮೂಟೆ ಹಾಕಿ ನಿಲ್ಲಿಸಿಕೊಳ್ಳಿ ಎನ್ನುತ್ತಿದ್ದಾರೆ~ ಎಂದರು.

ನಾಲೆ ಒಡೆದು ನೀರು ರಭಸವಾಗಿ ನುಗ್ಗಿ ಬೆಳೆ ಹಾನಿ ಆಗಿದೆ. ಈ ಭಾಗದಲ್ಲಿ ಮೇಲಿಂದ ಮೇಲೆ ಇಂಥ ಘಟನೆ ನಡೆಯುತ್ತಿವೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಂಡು ನಾಲೆಯನ್ನು ರಿಪೇರಿ ಮಾಡಿಸಬೇಕು ಎಂದು ಗ್ರಾಮದ ರೈತರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.