ADVERTISEMENT

ನಕಲಿ ಪಡಿತರ: ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2011, 16:45 IST
Last Updated 5 ಫೆಬ್ರುವರಿ 2011, 16:45 IST

ಹುಬ್ಬಳ್ಳಿ: ಅನರ್ಹ ಹಾಗೂ ನಕಲಿ ಪಡಿತರ ಚೀಟಿಗಳನ್ನು ಪತ್ತೆ ಮಾಡುವುದಕ್ಕಾಗಿ ಅಡುಗೆ ಅನಿಲ ವಿತರಣೆ ಏಜೆನ್ಸಿಗಳ ಮೂಲಕ ಮಾಹಿತಿ ಸಂಗ್ರಹ ಕಾರ್ಯ ಕೈಗೊಳ್ಳಲಾಗಿದೆ. ಗ್ರಾಹಕರಿಗೆ ಅನಿಲ ಸಿಲಿಂಡರ್ ಪೂರೈಸುವಲ್ಲಿ ಇದರಿಂದ ಯಾವುದೇ ಧಕ್ಕೆಯಾಗುವುದಿಲ್ಲ. ಸಾರ್ವಜನಿಕರು ಈ ಕುರಿತು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ದರ್ಪಣ್ ಜೈನ್ ಸ್ಪಷ್ಟಪಡಿಸಿದರು.

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ (ಡಿಡಿಯುಡಬ್ಲ್ಯುಜೆ) ವತಿಯಿಂದ ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ಆಯೋಜಿಸಲಾಗಿದ್ದ ‘ಪತ್ರಿಕಾ ಸಂವಾದ’ದಲ್ಲಿ ಅವರು ಮಾತನಾಡಿದರು.

ಜನಸಂಖ್ಯೆಗೆ ತಾಳೆ ಹಾಕಿ ನೋಡಿದರೆ ಪಡಿತರ ಚೀಟಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ನಕಲಿ ಪಡಿತರ ಚೀಟಿಗಳನ್ನು ಪತ್ತೆ ಮಾಡಲು ಈ ಹಿಂದೆ ನಡೆಸಿದ ಕೆಲ ಸಮೀಕ್ಷೆಗಳು ನಿರೀಕ್ಷಿತ ಫಲ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಅಡುಗೆ ಅನಿಲ ವಿತರಕ ಸಂಸ್ಥೆಗಳ ಮೂಲಕ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದರು.

ನಕಲಿ ಪಡಿತರ ಚೀಟಿಗಳ ಮೂಲಕ ಅನರ್ಹರು ಈ ಸೌಲಭ್ಯಗಳನ್ನು ದುರ್ಬಳಕೆ ಮಾಡುತ್ತಿದ್ದಾರೆ. ಪಡಿತರ ಚಿಮಣಿ ಎಣ್ಣೆಯನ್ನು ಪೆಟ್ರೋಲ್-ಡೀಸೆಲ್‌ನಲ್ಲಿ ಕಲಬೆರಕೆ ಮಾಡಲು ಬಳಸುತ್ತಿದ್ದಾರೆ. ಸಬ್ಸಿಡಿ ದರದಲ್ಲೇ ನೀಡುತ್ತಿರುವ ಅಡುಗೆ ಅನಿಲ ಸಿಲಿಂಡರ್‌ಗಳನ್ನು ವಾಹನಗಳಲ್ಲಿ ಬಳಸಲಾಗುತ್ತಿದೆ.  ಅಕ್ರಮಗಳನ್ನು ತಡೆಗಟ್ಟುವ ಸಾರ್ವಜನಿಕ ಹಿತಾಸಕ್ತಿಯ ಈ ಕಾರ್ಯದಲ್ಲಿ ಜನರು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.