ಭಟ್ಕಳ: ನಾಪತ್ತೆಯಾಗಿದ್ದ ತಾಲ್ಲೂಕಿನ ಜಾಲಿ ಗ್ರಾ.ಪಂ. ಉಪಾಧ್ಯಕ್ಷ ಅಬ್ದುಲ್ ಸಲಾಮ್ ದಾಮ್ದಾ (55) ಅಲಿಯಾಸ್ ಮೆಡಿಕಲ್ ಸಲಾಮ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಕುಮಟಾದ ಕತಗಾಲ ಸಮೀಪದ ದೇವಿಮನೆ ಘಟ್ಟದ ಅರಣ್ಯ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ.
ಭೂಮಿ ವ್ಯವಹಾರ ನಡೆಸುತ್ತಿದ್ದ ಅವರನ್ನು ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಈ ವ್ಯವಹಾರ ನಿಮಿತ್ತವೇ ಸೆ.6ರಂದು ಕುಮಟಾಕ್ಕೆ ಹೋಗಿ, ಅಲ್ಲಿಂದ ಶಿರಸಿಗೆ ತೆರಳುವುದಾಗಿ ಮನೆಯವರಿಗೆ ತಿಳಿಸಿದ್ದರಂತೆ.
ದಾಮ್ದಾ ಅವರು ನಾಲ್ಕು ದಿನಗಳ ಹಿಂದೆಯೇ ಮೃತಪಟ್ಟಿರಬಹದು ಎನ್ನಲಾಗಿದೆ. ಸೆ.6ರಂದು ಬೆಳಿಗ್ಗೆ ಮನೆಯಿಂದ ಹೊರಟವರು, ದೂರವಾಣಿಯಲ್ಲೂ ಸಂಪರ್ಕಿಸದೇ ಈವರೆಗೆ ಮನೆಗೆ ಹಿಂತಿರುಗಿ ಬಂದಿಲ್ಲವೆಂದು ಮೃತರ ಮಗ ಶುಕ್ರವಾರವಷ್ಟೇ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಆದರೆ ಭಾನುವಾರ ಶವ ಪತ್ತೆಯಾಗಿದೆ. ಶವವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಗುರುತು ಹಚ್ಚುವುದಕ್ಕೆ ಅವರ ಕುಟುಂಬದವರೂ ಸಹ ತೀವ್ರ ಪ್ರಯಾಸಪಟ್ಟು, ಕೊನೆಗೆ ಅವರು ಹಾಕಿಕೊಂಡಿದ್ದ ಅಂಗಿ ಮತ್ತು ಸೊಂಟದಲ್ಲಿದ್ದ ಬೆಲ್ಟ್ನಿಂದ ಗುರುತು ಹಿಡಿದರು ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.