ADVERTISEMENT

ನೀರಿನ ಸಮಸ್ಯೆ ನಿವಾರಣೆ: ಟ್ಯಾಂಕರ್ ಮೂಲಕ ಪೂರೈಕೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ವಿಜಯಪುರ: ಸಮೀಪದ ನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 11 ಹಳ್ಳಿಗಳಿದ್ದು, ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿರುವ ಜೊನ್ನಹಳ್ಳಿ, ಮಲ್ಲೇಪುರ, ಬಿದಲಪುರ, ಬಾಲೇಪುರ ಮತ್ತು ಚೀಮಾಚನಹಳ್ಳಿಗಳಿಗೆ ಈಗ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.

ಮಲ್ಲೇಪುರದಲ್ಲಿ ಕೊರೆಯಿಸಿದ 2 ಬಾವಿ ವಿಫಲಗೊಂಡಿದ್ದು, 3ನೇ ಬಾವಿ ಕೊರೆಯಿಸಲು ಚಾಲನೆ ನೀಡಲಾಗಿದೆ. ಬಾಲೇಪುರದಲ್ಲೂ 2 ಬಾವಿ ವಿಫಲವಾಗಿವೆ. ಪುನರ್ ಕೊರೆತದಿಂದಲೂ ನೀರು ಸಿಗದ ಕಾರಣ ಪ್ರತಿ ದಿನ ತಲಾ 2 ಟ್ಯಾಂಕರ್ ನೀರನ್ನು ಈ ಹಳ್ಳಿಗಳಿಗೆ ಸರಬರಾಜು ಮಾಡಲಾಗುತ್ತಿದೆ.

ಜೊನ್ನಹಳ್ಳಿಯಲ್ಲಿ ಶಾಸಕರ ಅನುದಾನದಿಂದ ಕೊರೆಯಿಸಿದ ಕೊಳವೆಬಾವಿಗೆ ಜಿ.ಪಂ.ವತಿಯಿಂದ ಪಂಪು ಮತ್ತು ಮೋಟಾರ್ ನೀಡಿದ ತಕ್ಷಣ ನೀರಿಗೆ ಚಾಲನೆ ನೀಡಲಾಗುವುದು ಮತ್ತು ಚೀಮಾಚನಹಳ್ಳಿಯಲ್ಲೂ ಇದೇ ಪರಿಸ್ಥಿತಿಯಿದ್ದು, ಕೊಳವೆಬಾವಿಯಲ್ಲಿ ದೊರೆತ ನೀರನ್ನು ಬಳಸಿಕೊಳ್ಳಲು ಬೆಸ್ಕಾಂನಿಂದ ವಿದ್ಯುತ್ ವ್ಯವಸ್ಥೆ ಮಾಡಲಾಗಿ ಎಂದು ನಲ್ಲೂರು ಗ್ರಾ.ಪಂ. ಅಧ್ಯಕ್ಷೆ ಶಾರದಮ್ಮ ಮುನೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.

ಜಿ.ಪಂ.ವತಿಯಿಂದ ಪೈಪ್, ಕೇಬಲ್ ಮತ್ತು ಪ್ಯಾನಲ್ ಬೋರ್ಡ್ ವ್ಯವಸ್ಥೆಯಾದರೆ ಇನ್ನೊಂದು ವಾರದೊಳಗೆ ಸಮರ್ಪಕ ನೀರು ಪೂರೈಕೆಯಾಗಲಿದೆ. ಒಂದು ವೇಳೆ ಜಿ.ಪಂ.ವತಿಯಿಂದ ಕೆಲಸ ತಡವಾದರೆ ಸ್ವಂತ ಖರ್ಚು ಭರಿಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಚೀಮಾಚನಹಳ್ಳಿ ಜನರು ನೀರಿಗಾಗಿ ಕಷ್ಟಪಡುತ್ತಿರುವ ಬಗ್ಗೆ`ಪ್ರಜಾವಾಣಿ~ಯಲ್ಲಿ ಪ್ರಕಟವಾದ ವರದಿ ನೋಡಿದ ತಕ್ಷಣವೇ ಅದಕ್ಕೆ ಪಂಚಾಯ್ತಿ ಸ್ಪಂದಿಸಿದೆ. 2 ದಿನಗಳಿಗೊಮ್ಮೆ 7,500 ಲೀಟರ್ ಸಾಮರ್ಥ್ಯವುಳ್ಳ 3 ಟ್ಯಾಂಕರ್‌ಗಳಲ್ಲಿ ನೀರನ್ನು ಒದಗಿಸಲಾಗುತ್ತಿದೆ ಎಂದು ಶಾರದಮ್ಮ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.