ದಾವಣಗೆರೆ: ಮಹಾನಗರ ಪಾಲಿಕೆ ಆವರಣದಲ್ಲಿನ ನೆಮ್ಮದಿ ಕೇಂದ್ರದ ಅವ್ಯವಸ್ಥೆ ಖಂಡಿಸಿ ನಾಗರಿಕರು ಶನಿವಾರ ಪುಣೆ- ಬೆಂಗಳೂರು (ಪಿಬಿ) ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಇದರಿಂದ ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆ ಸಂಚಾರಕ್ಕೆ ತಡೆಯಾಗಿತ್ತು. ವಾಹನ ಸವಾರರು ಪರದಾಡುವಂತಾಯಿತು.
`ಇಂದು ಮುಂಜಾನೆ 4ಗಂಟೆಯಿಂದ ಆದಾಯ ಪ್ರಮಾಣಪತ್ರ ಪಡೆಯಲು ಸರದಿ ಸಾಲಿನಲ್ಲಿ ನಿಂತಿದ್ದೇವೆ. ಆದರೆ, ಸಂಜೆ 4ರ ಸುಮಾರಿಗೆ ನೆಮ್ಮದಿ ಕೇಂದ್ರದ ಕಂಪ್ಯೂಟರ್ ಆಪರೇಟರ್ ಏಕಾಏಕಿ ಪ್ರಮಾಣಪತ್ರ ವಿತರಣೆಗೆ ತಡೆ ಒಡ್ಡಿದ್ದರು. ಇದರಿಂದ ಬೆಳಿಗ್ಗೆಯಿಂದ ಸರದಿಯಲ್ಲಿ ನಿಂತಿದ್ದ ನಾಗರಿಕರು ಆಕ್ರೋಶಗೊಂಡರು~ ಎಂದು ಮಹಿಳೆಯೊಬ್ಬರು ಬೇಸರ ವ್ಯಕ್ತಪಡಿಸಿದರು.
`ಪಡಿತರ ಚೀಟಿ ಪಡೆಯಲು ಆದಾಯ ಪ್ರಮಾಣ ಪತ್ರ ಕಡ್ಡಾಯ ಮಾಡಿದ್ದಾರೆ. ಜೂನ್ 30 ಕಡೇ ದಿನ. ಸತತವಾಗಿ ಮೂರು ದಿನಗಳಿಂದ ಸರದಿ ಸಾಲಿನಲ್ಲಿ ನಿಂತು ವಾಪಸ್ ಹೋಗುತ್ತಿದ್ದೇನೆ. ರೂ 300 ಕೊಟ್ಟರೇ ನಾವು ಹೇಳುವ ಆದಾಯ ನಮೂದಿಸಿ, ಪ್ರಮಾಣಪತ್ರ ಕೊಡ್ತಾರೆ. ರೂ 500 ಕೊಟ್ಟರೆ ಒಂದು ಗಂಟೆಯಲ್ಲೇ ಪ್ರಮಾಣಪತ್ರ ಸಿಗುತ್ತದೆ. ದುಡ್ಡಿಲ್ಲದ ಬಡವರು ಏನು ಮಾಡ್ಬೇಕು? ಗಂಡಸರು, ಹೆಂಗಸರು ಎಲ್ಲರಿಗೂ ಒಂದೇ ಸರದಿ ಸಾಲು. ಒಂದೇ ಕೌಂಟರ್ನಲ್ಲಿ ಪ್ರಮಾಣಪತ್ರ ವಿತರಿಸುತ್ತಾರೆ.
ಇದರಿಂದ ಸಮಸ್ಯೆ ಮತ್ತಷ್ಟು ಉಲ್ಬಣಿಸಿದೆ. ತಹಶೀಲ್ದಾರ್ ಇನ್ನಾದರೂ ಸೂಕ್ತಕ್ರಮ ಕೈಗೊಂಡು ಸಮಸ್ಯೆ ಪರಿಹರಿಸಲಿ~ ಎಂದು ಕೃಷ್ಣ, ಬಸವರಾಜ ಒತ್ತಾಯಿಸಿದರು.
ಪ್ರತಿಭಟನಾಕಾರರ ಸಮಸ್ಯೆ ಆಲಿಸಿದ ಉಪ ವಿಭಾಗಾಧಿಕಾರಿ ನಾಗರಾಜ ಮಾತನಾಡಿ, ಶೀಘ್ರದಲ್ಲೇ ಸಮಸ್ಯೆ ಪರಿಸಹರಿಸಲಾಗುವುದು ಎಂದು ಭರವಸೆ ನೀಡಿದರು.
ಸ್ಥಳಕ್ಕೆ ಆಗಮಿಸಿದ ಸಿಪಿಐ ಎಚ್.ಕೆ. ರೇವಣ್ಣ ಮತ್ತು ಸಿಬ್ಬಂದಿ ಪ್ರತಿಭಟನಾಕಾರರ ಮನ ಒಲಿಸಿ, ಸುಗಮ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.