ADVERTISEMENT

ನ್ಯಾಯಬೆಲೆ ಅಂಗಡಿಯಲ್ಲಿ ಕಿರಿಕಿರಿ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2011, 19:30 IST
Last Updated 8 ಆಗಸ್ಟ್ 2011, 19:30 IST
ನ್ಯಾಯಬೆಲೆ ಅಂಗಡಿಯಲ್ಲಿ ಕಿರಿಕಿರಿ: ಪ್ರತಿಭಟನೆ
ನ್ಯಾಯಬೆಲೆ ಅಂಗಡಿಯಲ್ಲಿ ಕಿರಿಕಿರಿ: ಪ್ರತಿಭಟನೆ   

ರಾಯಚೂರು: ನಗರದಲ್ಲಿರುವ ಪಡಿತರ ಕಾರ್ಡ್ ಹೊಂದಿರುವವರಿಗೆ ನ್ಯಾಯಬೆಲೆ ಅಂಗಡಿಯಲ್ಲಿ  ಒಂದು ತಿಂಗಳಿನಿಂದ  ತೊಂದರೆಯಾಗುತ್ತಿದೆ. ಪಡಿತರ ವಿತರಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಮನೆ ನಂಬರ್, ಆರ್‌ಆರ್ ನಂಬರ್ ನೀಡಬೇಕು ನೆಪವೊಡ್ಡಿ ಸಾಗಹಾಕಲಾಗುತ್ತಿದೆ. ಇದರಿಂದ ಬಡ ಜನತೆಗೆ ತೊಂದರೆಯಾಗುತ್ತಿದೆ. ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿ ಸೋಮವಾರ ಜಾತ್ಯತೀತ ಜನತಾ ದಳ ನಗರದಲ್ಲಿ ಪ್ರತಿಭಟನಾ ರ‌್ಯಾಲಿ ನಡೆಸಿತು.

ಆಹಾರ ಇಲಾಖೆಯ ನಿರ್ದೇಶನವಿದೆ. ಆರ್‌ಆರ್ ನಂಬರ್, ಮನೆ ನಂಬರ್ ಕೊಡಲೇ ಬೇಕು. ಅದಿದ್ದರೆ ಮಾತ್ರ ಪಡಿತರ ವಿತರಣೆ ಮಾಡಲಾಗುವುದು. ಇಲ್ಲದಿದ್ದರೆ ಇಲ್ಲ ಎಂದು ಪಡಿತರ ಕಾರ್ಡ್‌ದಾರರನ್ನು ಮರಳಿ ಕಳುಹಿಸಲಾಗುತ್ತಿದೆ. ಕೆಲ ಬಡಾವಣೆ, ಕೊಳಚೆ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಆರ್‌ಆರ್ ನಂಬರ್, ಮನೆ ನಂಬರ್‌ಗಳೇ ಇಲ್ಲ. ದೊಡ್ಡ ಕುಟುಂಬ ಇದ್ದವರು ಬೇರೆ ಬೇರೆ ಕಡೆ ವಾಸ ಮಾಡುತ್ತಿದ್ದಾರೆ. ಹೀಗಾಗಿ, ಇದು ಕೂಡಾ ಆರ್‌ಆರ್ ನಂಬರ್, ಮನೆ ನಂಬರ್‌ಗಳಿಲ್ಲದೇ ಇರುವುದಕ್ಕೆ ಕಾರಣ. ಆದರೆ ಈ ಕುಟುಂಬಗಳಿಗೆ ಆಸರೆ ಎಂದರೆ ಪಡಿತರ. ಈಗ ಸರ್ಕಾರ ಅದನ್ನೇ ಸ್ಥಗಿತಗೊಳಿಸಿದರೆ ಕಷ್ಟವಾಗುತ್ತದೆ ಎಂದು ವಿವರಿಸಿದರು.

ಕೂಡಲೇ ಈ ತಾಂತ್ರಿಕ ಸಮಸ್ಯೆ ಸರಿಪಡಿಸಬೇಕು. ನ್ಯಾಯಬೆಲೆ ಅಂಗಡಿ ಮೂಲಕ ಪಡಿತರ ವಿತರಣೆಗೆ ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಶೇಖ ರಿಜ್ವಾನ್, ಪ್ರಧಾನ ಕಾರ್ಯದರ್ಶಿ ಎನ್ ಶಿವಶಂಕರ ವಕೀಲ, ನಗರಸಭೆ ಸದಸ್ಯರಾದ ಬಿ ತಿಮ್ಮಾರೆಡ್ಡಿ, ಸುಭಾಷ ಮತ್ತು ಯಲ್ಲಪ್ಪ, ಪಕ್ಷದ ಮುಖಂಡರಾದ ಮಹಾಂತೇಶ ಪಾಟೀಲ ಅತ್ತನೂರ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.