ADVERTISEMENT

ನ್ಯಾಯಾಂಗ ಯಶಸ್ಸಿಗೆ ನೌಕರರ ಪಾತ್ರ ಮಹತ್ವದ್ದು

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಚಿಕ್ಕಮಗಳೂರು: ನ್ಯಾಯಾಂಗ ಇಲಾಖೆ ಯಶಸ್ವಿಯಾಗಿ ಕಾರ್ಯನಿರ್ವಹಿಸಲು ಇಲಾಖೆಯ ಪ್ರತಿಯೊಬ್ಬ ನೌಕರರ ಪಾತ್ರವೂ ಮಹತ್ವಪೂರ್ಣವಾದುದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಚಿಕ್ಕಮಗಳೂರು ಜಿಲ್ಲೆ ಆಡಳಿತಾತ್ಮಕ ನ್ಯಾಯಮೂರ್ತಿ ಸುಭಾಷ್ ಬಿ.ಆದಿ ಅಭಿಪ್ರಾಯಪಟ್ಟರು.

ನಗರದಲ್ಲಿ ಭಾನುವಾರ ನಡೆದ ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಸಂಘದ ಸ್ನೇಹ ಸಂಗಮ ಕಾರ್ಯಕ್ರಮ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

`ನ್ಯಾಯಾಲಯ ಒಂದು ಕುಟುಂಬ ಇದ್ದಂತೆ. ಇಲ್ಲಿ ನೌಕರರೂ ಅವಿಭಾಜ್ಯ ಅಂಗ. ತ್ವರಿತ ನ್ಯಾಯ ಒದಗಿಸಲು ನೌಕರರ ಪಾತ್ರವೂ ಮುಖ್ಯ. ನ್ಯಾಯಾಧೀಶರು, ವಕೀಲರಷ್ಟೇ ಸಮಪಾಲು ನೌಕರರದ್ದು ಇರುತ್ತದೆ ಎಂದರು.

ನಿವೃತ್ತರಾದ ನೌಕರರು ಕೀಳರಿಮೆ ಇಟ್ಟುಕೊಳ್ಳಬಾರದು. ಆಗಾಗ ನ್ಯಾಯಾಲಯಕ್ಕೆ ಬಂದು ಕಿರಿಯ ನೌಕರರಿಗೆ ಸಲಹೆ, ಸಹಕಾರ ನೀಡಬೇಕು. ನಿವೃತ್ತರಿಗೆ ಆರ್ಥಿಕ ಹಾಗೂ ನೈತಿಕವಾಗಿ ವೃತ್ತಿನಿರತರು ಬೆಂಬಲ ನೀಡಬೇಕು~  ಎಂದರು.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಬಸವರಾಜ್.ಎ ಪಾಟೀಲ್ ಮಾತನಾಡಿ, ಸಂಘಟನೆಯಿಂದ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ನೌಕರರಲ್ಲಿ ನಿಸ್ವಾರ್ಥ ಸೇವಾ ಮನೋಭಾವ  ಇರಬೇಕು. ಕಕ್ಷಿಗಾರರ ಕೆಲಸವನ್ನು ಆದಷ್ಟು ಶೀಘ್ರ ಮಾಡಿಕೊಡುವುದರಿಂದ ಅವರಲ್ಲಿಯೂ ಇಲಾಖೆ, ನ್ಯಾಯಾಲಯದ ಮೇಲೆ ಒಳ್ಳೆಯ ಭಾವನೆ ಮೂಡುತ್ತದೆ ಎಂದರು.

ಭಾರತೀಯ ವಕೀಲರ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ರಾಜ್ಯ ನ್ಯಾಯಾಂಗ ಇಲಾಖೆ ನೌಕರರ ಸಂಘದ ಅಧ್ಯಕ್ಷ ಬಿ.ಎಸ್.ಪ್ರಭಾಕರ ಪ್ರಸಾದ್, ವಕೀಲರ ಸಂಘದ ಅಧ್ಯಕ್ಷ ಎಸ್.ಎಚ್.ಮಹೇಶ್‌ಕುಮಾರ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಮಂಜುನಾಥ್ ಇದ್ದರು. 16 ಮಂದಿ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.