ADVERTISEMENT

ಪರಮಾತ್ಮನಿಗೆ ಶರಣಾದರೆ ಒತ್ತಡ ಮುಕ್ತಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಗುಲ್ಬರ್ಗ: `ಎಲ್ಲ ಚಿಂತೆಗಳನ್ನು ಪರಮಾತ್ಮನಿಗೆ ಸಮರ್ಪಣೆ ಮಾಡಿ ಆತನಿಗೆ ಶರಣಾದರೆ ಒತ್ತಡಮುಕ್ತ ಜೀವನ ಸಾಧ್ಯವಿದೆ~ ಎಂದು ಮೈಸೂರಿನ ರಾಜಯೋಗಿನಿ ಶಾರದಾ ಅವರು ಭಾನುವಾರ ಇಲ್ಲಿ ತಿಳಿಸಿದರು.

ಗುಲ್ಬರ್ಗದಲ್ಲಿ ಸೋಮವಾರ ನಡೆಯಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಮಹೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ಚಂದ್ರಕಾಂತ ಪಾಟೀಲ ಶಾಲೆ ಆವರಣದಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅವರು `ಒತ್ತಡದಿಂದ ಮುಕ್ತಿ~ ಕುರಿತು ಉಪನ್ಯಾಸ ನೀಡಿದರು.

ಕೆಲ ನಿಮಿಷ ಧ್ಯಾನದಿಂದ ಸ್ವಯಂ ನಿಯಂತ್ರಣ ಸಾಧಿಸಿಕೊಳ್ಳಿ. ಶಾಂತಿ, ನಿಶ್ಶಬ್ದಕ್ಕೆ ವಿಶಿಷ್ಟ ಶಕ್ತಿ ಇದೆ ಎಂದು ಮನದಟ್ಟು ಮಾಡಿಕೊಳ್ಳುವಂತೆ  ತಿಳಿಸಿದರು. ಪರಮಾತ್ಮನ ನೆನಪಿನಿಂದ ಮನೋಬಲ ಹೆಚ್ಚುತ್ತದೆ. ಆಂತರಿಕ ಶಕ್ತಿ ಇಲ್ಲದಾಗ ಒತ್ತಡ ಹೆಚ್ಚು ಎಂದರು.

ಆಗುವ ಘಟನೆಗಳನ್ನು ಒಳಿತಿಗಾಗಿ ಎಂದು ಭಾವಿಸಬೇಕು. ಕೈಯಲ್ಲಿ ಇಲ್ಲದ ನಿನ್ನೆ, ಬರುವ `ನಾಳೆ~ಯ ಚಿಂತೆ ಸಲ್ಲದು. ಇಂದೇನು, ಅದರ ಯಶಸ್ಸು ಹೇಗೆಂಬ ವಿಚಾರದೊಂದಿಗೆ ಕಾರ್ಯತತ್ಪರ ರಾಗಬೇಕು. ಇತರರ ಜೊತೆ ಹೋಲಿಸಿ ಕೀಳರಿಮೆ ಬೆಳೆಸಿಕೊಳ್ಳದಿರಿ. ನೀವೊಂದು ವಿಶೇಷ ಆತ್ಮ ಎಂದು ತಿಳಿದುಕೊಳ್ಳಿ ಎಂದು ನುಡಿದರು.

ಟೀಕಿಸುವ ವ್ಯಕ್ತಿಗಳು ನಮ್ಮನ್ನು ವಿಶ್ಲೇಷಿಸಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಆಂತರಿಕ ಶಕ್ತಿ ಹೆಚ್ಚಿಸುವ ಅವರು ಮನಶಾಸ್ತ್ರಜ್ಞರು ಎಂದು ಭಾವಿಸಬೇಕು. ದುಃಖ ಕೊಟ್ಟವರನ್ನು ಕ್ಷಮಿಸಬೇಕು. ದುಃಖಕ್ಕೆ ಪೂರಕವಾದ ಘಟನೆಗಳನ್ನು ಮರೆಯಬೇಕು.

ನಾನು ದೇಹವಲ್ಲ. ಆತ್ಮ ಎಂಬ ಚಿಂತನೆ ಇದ್ದರೆ ಒತ್ತಡ ಇರುವುದಿಲ್ಲ. ಆಶಕ್ತರ ಸೇವಾ ಕಾರ್ಯದಿಂದ ಸುಖ ಕೊಟ್ಟು ಶುಭಸಂಕಲ್ಪ (ಆಶೀರ್ವಾದ) ಪಡೆಯಲು ಅವಕಾಶವಿದೆ. ದೈನಂದಿನ ಚಟುವಟಿಕೆ ಕಡೆ ಧನಾತ್ಮಕ ಚಿಂತನೆ ನಿಮ್ಮದಾಗಿರಲಿ. ವಿಶ್ವವೇ ಒಂದು ನಾಟಕದಂತೆ. ಅದರಲ್ಲಿ ನನ್ನದೊಂದು ಪಾತ್ರ ಮಾತ್ರ ಅಂದುಕೊಳ್ಳಿಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.