ADVERTISEMENT

ಪರೀಕ್ಷಾ ಭಯ ನಿವಾರಿಸಿ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2012, 19:30 IST
Last Updated 16 ನವೆಂಬರ್ 2012, 19:30 IST

ಧಾರವಾಡ:  `ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಪ್ರಾದೇಶಿಕ ಭಾಷೆಯಲ್ಲಿಯೇ ಪರೀಕ್ಷೆ ಹಾಗೂ ಸಂದರ್ಶನ ನಡೆಸುವುದರಿಂದ ಯುವಜನತೆ ಈ ಅವಕಾಶವನ್ನು ಬಳಸಿಕೊಳ್ಳಬೇಕು~ ಎಂದು ಆಯೋಗದ ಜಂಟಿ ನಿರ್ದೇಶಕ ಡಾ.ಕೆ.ಕೆ.ಜಾಧವ್ ಹೇಳಿದರು.

ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ `ಸಮಾನ ಅವಕಾಶ ಘಟಕ~ವು ಶುಕ್ರವಾರ ಏರ್ಪಡಿಸಿದ್ದ ಯುಪಿಎಸ್‌ಸಿ ಪರೀಕ್ಷೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಯುಪಿಎಸ್‌ಸಿ ಪರೀಕ್ಷೆ ಪಾಸು ಮಾಡುವ ಕ್ಷಮತೆ ಹೊಂದಿದ್ದರೂ ಅವರಿಗೆ ಪರೀಕ್ಷೆಯ ಭಯವಿದೆ. ಇದನ್ನು ಬದಿಗೊತ್ತಿ ಅವರಲ್ಲಿ ಆಯೋಗದ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸಬೇಕು~ ಎಂದರು. 
`ಯುಪಿಎಸ್‌ಸಿ ಒಟ್ಟು 14 ಸೇವಾಕ್ಷೇತ್ರಗಳು ಹಾಗೂ 24 ವಲಯಗಳಲ್ಲಿ ನೇಮಕಾತಿ ನಡೆಸುತ್ತದೆ.

ವಿದ್ಯಾರ್ಥಿಗಳು ತಮಗೆ ಬೇಕಾದ ಕ್ಷೇತ್ರವನ್ನು ಆರಿಸಿಕೊಳ್ಳಬಹುದು. ಅವರು ಪಡೆದ ಅಂಕಗಳ ಆಧಾರದ ಮೇಲೆ ಆಯಾ ಕ್ಷೇತ್ರಗಳಿಗೆ ನಿಯೋಜನೆಗೊಳ್ಳುತ್ತಾರೆ. ಅಂತರ್ಜಾಲದ ಮೂಲಕ ಪರೀಕ್ಷೆ ನಡೆಸಿದ ಮೊದಲ ಸಂಸ್ಥೆ ಯುಪಿಎಸ್‌ಸಿ. ಕಳೆದ ವರ್ಷ ಸುಮಾರು 6.7 ಲಕ್ಷ ಅಭ್ಯರ್ಥಿಗಳು ವಿವಿಧ ಪರೀಕ್ಷೆಗಳಿಗೆ ಹಾಜರಾಗಿದ್ದರು~ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿ.ವಿ. ಕುಲಸಚಿವ ಡಾ. ಎಸ್.ಎ.ಪಾಟೀಲ, `ಆಯೋಗದ ಪರೀಕ್ಷೆಗಳ ಬಗ್ಗೆ ಉತ್ತರ ಕರ್ನಾಟಕದಲ್ಲಿ ಜಾಗೃತಿ ಕಡಿಮೆ ಇದೆ. ಅದನ್ನು ಹೋಗಲಾಡಿಸಲು ವಿಶ್ವವಿದ್ಯಾಲಯವು ಮುಂದಾಗಿದೆ~ ಎಂದರು.

ಮೌಲ್ಯಮಾಪನ ಕುಲಸಚಿವ ಡಾ. ಕೆ.ಆರ್.ದುರ್ಗಾದಾಸ್ ಸ್ವಾಗತಿಸಿದರು, ಪ್ರೊ.ಅರವಿಂದ ಮೂಲಿಮನಿ ವಂದಿಸಿದರು. ಡಾ.ಶ್ಯಾಮಲಾ ರತ್ನಾಕರ ನಿರೂಪಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.