ಮುನಿರಾಬಾದ್: ಇಲ್ಲಿಗೆ ಸಮೀಪದ ಹುಲಿಗಿಯ ತುಂಗಭದ್ರಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾನುವಾರ ನಡೆದ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನುಕರಣೀಯ ಕಾರ್ಯ ಮಾಡಿದ್ದಾರೆ. ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳನ್ನು ಜಾಗೃತಿಗೊಳಿಸಿದ ಶಾಲೆಯ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿ, ವಿದ್ಯಾರ್ಥಿನಿ ಕನಿಷ್ಠ ಐದು ಮಕ್ಕಳನ್ನು ಕರೆತಂದು ಪೋಲಿಯೊ ಹನಿ ಹಾಕಿಸಿ, ಅಂಥ ಮಕ್ಕಳ ಹೆಸರನ್ನು ಬರೆದುಕೊಂಡು ತರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದರು.ಅದರಂತೆ ರಜಾದಿನವನ್ನು ಲೆಕ್ಕಿಸದೇ ಸಮವಸ್ತ್ರ ಧರಿಸಿ ಬಂದ ವಿದ್ಯಾರ್ಥಿಗಳು ಹನಿ ಹಾಕುವ ಕಾರ್ಯದಲ್ಲಿ ತಮ್ಮ ಕೈ ಜೋಡಿಸಿದರು.
ಗ್ರಾಮದ ಬಸ್ ನಿಲ್ದಾಣದಲ್ಲಿ ಸ್ಥಾಪಿಸಿದ ಬೂತ್ಗೆ ಬಂದ ಶಾಲಾ ಮಕ್ಕಳು ಸದರಿ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಈ ಬಗ್ಗೆ ಮಾಹಿತಿ ನೀಡಿದ ಮುಖ್ಯ ಗುರು ರಾಜೇಶ್ ಪೂಜಾರ್,ಮಕ್ಕಳಲ್ಲಿ ಕಂಡು ಬರುವ ಅಂಗವಿಕಲತೆಯನ್ನು ನಿವಾರಿಸುವ ದಿಕ್ಕಿನಲ್ಲಿ ಇದೊಂದು ಮಹತ್ವದ ಕಾರ್ಯವಾಗಿದೆ.
ರಾಷ್ಟ್ರೀಯ ಕಾರ್ಯಕ್ರಮವಾದ ಇದರಲ್ಲಿ ಭಾಗವಹಿಸಿ ಹೆಚ್ಚಿನ ಪ್ರಮಾಣದ ಮಕ್ಕಳಿಗೆ ಮುಂಜಾಗ್ರತೆಯಾಗಿ ಹನಿ ಹಾಕಿಸುವುದರಿಂದ ಮುಂದೆ ಉಂಟಾಗಬಹುದಾದ ಸಂಭಾವ್ಯ ಅಂಗವಿಕಲತೆಯನ್ನು ತಪ್ಪಿಸಬಹುದು ಮತ್ತು ಇದೊಂದು ದೇಶ ಸೇವೆ ಎಂದು ತಿಳಿಸಿದರು.ಪರಿಸರ ಸಂರಕ್ಷಣೆ ಮತ್ತು ಅನೇಕ ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಈ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಿಬ್ಬಂದಿ ಸಾರ್ವಜನಿಕರ ಪ್ರಶಂಸೆಗೆ ಗುರಿಯಾಗಿದ್ದಾರೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.