ADVERTISEMENT

ಪಾಶ್ಚಾತ್ಯರ ಚಿತ್ರಣ ಭಾರತದ ವಾಸ್ತವ ಅಲ್ಲ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2011, 18:30 IST
Last Updated 19 ಫೆಬ್ರುವರಿ 2011, 18:30 IST

ಶಿವಮೊಗ್ಗ:ಪಾಶ್ಚಿಮಾತ್ಯರು ತಮ್ಮ ಅನುಭವದ ಮೂಲಕ ನೀಡಿದ ಚಿತ್ರಣವನ್ನೇ ಎಲ್ಲರೂ ಭಾರತದ ವಾಸ್ತವ ಎಂದು ತಿಳಿದಿದ್ದಾರೆ.ಆದರೆ, ಅದು ನಿಜವಾದ ವಾಸ್ತವವಲ್ಲ.ಇಂದು ನಾವು ನಮ್ಮ ಅನುಭವದ ಮೂಲಕ ಸಮಾಜ ವಿಜ್ಞಾನವನ್ನು ಕಟ್ಟಿಕೊಳ್ಳಬೇಕಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ರಾಜಾರಾಮ ಹೆಗಡೆ ಹೇಳಿದರು.

ನಗರದ ಡಿವಿಎಸ್ ಕಾಲೇಜಿನಲ್ಲಿ ಶನಿವಾರ ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಹಮ್ಮಿಕೊಂಡಿದ್ದ ‘ಭಾರತೀಯ ಸಂಸ್ಕೃತಿ ಮತ್ತು ಧರ್ಮ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಾರತದಲ್ಲಿ ಧರ್ಮದ ಬಗ್ಗೆ ಮಾತನಾಡುವಾಗ ಪಾಶ್ಚಾತ್ಯ ರಾಷ್ಟ್ರದ ‘ರಿಲಿಜನ್’ ಎಂಬ ಅರ್ಥದಲ್ಲಿ ಮಾತನಾಡುತ್ತೇವೆ.

ಹಿಂದೂ ಧರ್ಮ ಎಂಬುದು ನಾವು ಶಾಲೆಗೆ ಸೇರಲು ಅರ್ಜಿ ತುಂಬಲು ಪ್ರಾರಂಭಿಸಿದಾಗ ಕಾಣಿಸುತ್ತದೆಯೇ ಹೊರತು, ಅದು ನಮ್ಮ ಅನುಭವಗಳಿಂದ ಬಂದಿಲ್ಲ ಎಂದರು.ಭಾರತೀಯರಿಗೆ ಜಾತಿ ಯಾವುದು ಎಂದು ಕೇಳಿದರೆ ಅರ್ಥವಾಗುತ್ತದೆ. ಆದರೆ ನಿಮ್ಮದು ಯಾವ ಧರ್ಮ ಎಂದು ಕೇಳಿದರೆ ಅರ್ಥವಾಗುವುದಿಲ್ಲ ಎಂದರು.

ಇದುವರೆಗೂ ನಾವು ಕ್ರಿಶ್ಚಿಯಾನಿಟಿ, ಇಸ್ಲಾಂ ಪ್ರಭೇದಗಳ ಮೂಲಕ ನಮ್ಮ ಸಂಪ್ರದಾಯವನ್ನು ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ್ದೇವೆ.ಧರ್ಮ ಎಂಬುದಕ್ಕೆ ಭಾರತದಲ್ಲಿ ಸಾಮಾನ್ಯವಾಗಿ ಯಾವುದು ಒಳ್ಳೆಯದು,ಯಾವುದು ಕೆಟ್ಟದು ಎಂಬ ಕಲ್ಪನೆಗಳಿವೆ.ಆದರೆ, ಅದನ್ನು ‘ರಿಲಿಜನ್’ ಎಂದು ಭಾವಿಸಿದರೆ ನಮ್ಮ ಸಮಾಜ ವಿಜ್ಞಾನ ನಶಿಸಿಹೋಗುತ್ತದೆ ಎಂದರು.

ವಿಚಾರ ಸಂಕಿರಣವನ್ನು ಉಪ ವಿಭಾಗಾಧಿಕಾರಿ ಎಂ.ಎಲ್. ವೈಶಾಲಿ ಉದ್ಘಾಟಿಸಿದರು. ಸಂಚಾಲಕರಾದ ಡಾ.ಡಂಕಿನ್ ಜಳಕಿ, ಷಣ್ಮುಖ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ.ಬಿ.ಎಂ ಹೊಸೂರ್ ವಹಿಸಿದ್ದರು.ಶ್ರೀವಲ್ಲಿ ಪ್ರಾರ್ಥಿಸಿದರು. ಪ್ರೊ. ಕೆ.ಜಿ. ವೆಂಕಟೇಶ್ ಸ್ವಾಗತಿಸಿದರು.ಗಿರೀಶ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.