ADVERTISEMENT

ಪ್ರಕರಣಗಳ ತ್ವರಿತ ವಿಲೇವಾರಿಗೆ ಶ್ರಮಿಸಿ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2012, 19:30 IST
Last Updated 1 ನವೆಂಬರ್ 2012, 19:30 IST

ಬಳ್ಳಾರಿ: ವಿವಿಧ ವ್ಯಾಜ್ಯಗಳಿಗೆ ಸಂಬಂಧಿಸಿದ ಪ್ರಕರಣಗಳು ಮಧ್ಯಸ್ಥಿಕೆ ಕೇಂದ್ರಗಳ ಮೂಲಕ ತ್ವರಿತವಾಗಿ ಇತ್ಯರ್ಥವಾಗುತ್ತಿವೆ. ವಕೀಲರು ಈ ಕುರಿತು ಉತ್ತಮ ತರಬೇತಿ ಪಡೆದು, ಪ್ರಕರಣಗಳ ಶೀಘ್ರ ವಿಲೇವಾರಿಗೆ ಸಹಕರಿಸಬೇಕು ಎಂದು ಜಿಲ್ಲಾ ನ್ಯಾಯಾಧೀಶೆ  ಎಂ.ಜಿ. ಉಮಾ ಸಲಹೆ ನೀಡಿದರು.

ಬೆಂಗಳೂರು ಮತ್ತು ಬಳ್ಳಾರಿ ಮಧ್ಯಸ್ಥಿಕೆ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘಗಳ ಸಹಯೋಗದಲ್ಲಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುರುವಾರ ಆರಂಭವಾದ ಮಧ್ಯಸ್ಥಿಕೆ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ ಬಾರಿ ನಡೆದ ಶಿಬಿರ ಅತ್ಯಂತ ಯಶಸ್ವಿಯಾಗಿದ್ದು, ತರಬೇತಿ ಪಡೆದ ವಕೀಲರು ಪ್ರಕರಣಗಳ ಶೀಘ್ರ ವಿಲೇವಾರಿಗೆ ಸಹಕರಿಸುತ್ತಿರುವುದು ಅಭಿನಂದನೀಯ ಎಂದು ಅವರು ಹೇಳಿದರು.
ಪ್ರಸ್ತುತ ಶಿಬಿರದಲ್ಲಿ 17 ಜನ ವಕೀಲರು ತರಬೇತಿ ಪಡೆಯುತ್ತಿದ್ದು, ಪ್ರಕರಣಗಳ ತ್ವರಿತ ವಿಲೇವಾರಿಗೆ ಶ್ರಮಿಸಬೇಕು ಎಂದು ಅವರು ಸೂಚಿಸಿದರು.

ಆಧುನಿಕತೆ ಪ್ರಕರಣಗಳ ಇತ್ಯರ್ಥಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ಕಕ್ಷಿದಾರರಿಗೆ ಯಾವ ರೀತಿಯ ಮಧ್ಯಸ್ಥಿಕೆ ಅಗತ್ಯ, ಪ್ರಕರಣಗಳ ಇತ್ಯರ್ಥಕ್ಕೆ ಯಾವ ಮಾರ್ಗ ಅನುಸರಿಸಿದರೆ ಒಳಿತು ಎಂಬುದರ ಕುರಿತು ತರಬೇತಿದಾರ ಪ್ರಸಾದ್ ಸುಬ್ಬಣ್ಣ  ವಿವರಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ಜಿ. ಶಿವಕುಮಾರ, ತರಬೇತುದಾರ ಆರ್. ವಿಜಯಕುಮಾರ್, ನ್ಯಾಯಾಧೀಶರಾದ ಬಿ.ಎಂ. ರಾಜು, ಬೈಲೂರು ಶಂಕರರಾಮ್, ಯೋಗೀಶ್, ಎನ್. ನರಸಮ್ಮ, ಎಂ.ಬಿ. ಕುಲಕರ್ಣಿ, ಝರೀನಾ, ವಕೀಲರ ಸಂಘದ ಕಾರ್ಯದರ್ಶಿ ಬದ್ರಿನಾಥ ಹಾಜರಿದ್ದರು.  ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ, ನ್ಯಾಯಾಧೀಶ ಹೊಸಮನಿ ಸಿದ್ಧಪ್ಪ ಸ್ವಾಗತಿಸಿದರು. ಕೆ. ಯರ‌್ರಿಗೌಡ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.