ADVERTISEMENT

ಪ್ರಕೃತಿ ವಿಕೋಪ ಹಾನಿ ತಡೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 19:30 IST
Last Updated 20 ಅಕ್ಟೋಬರ್ 2012, 19:30 IST

ವಿಜಾಪುರ: `ಜಿಲ್ಲಾ ಮಟ್ಟದ ಪ್ರಕೃತಿ ವಿಕೋಪ ನಿರ್ವಹಣೆ ಪ್ರಾಧಿಕಾರಗಳು ಕೆಳಹಂತದವರೆಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಬೇಕು. ನಿಖರ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡು ಸಂಭವನೀಯ ಪ್ರಕೃತಿ ವಿಕೋಪಗಳ ಹಾನಿ ತಡೆಗಟ್ಟಲು ಕಾರ್ಯೋನ್ಮುಖವಾಗಬೇಕು~ ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತ ಗಂಗಾರಾಮ ಬಡೇರಿಯಾ ಸೂಚಿಸಿದರು.

ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಬೆಳಗಾವಿ ವಿಭಾಗ ಮಟ್ಟದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

`ಪ್ರಕೃತಿ ನಿರ್ಮಿತ ಮತ್ತು ಮಾನವ ನಿರ್ಮಿತ ವಿಪತ್ತುಗಳು ಸಂಭವಿಸಿದಾಗ ತ್ವರಿತವಾಗಿ ಮಾಹಿತಿ ರವಾನೆ, ಸಮನ್ವಯತೆ, ಸಕಾಲಿಕ ಕ್ರಮ ಕೈಗೊಂಡರೆ ಜೀವ-ಆಸ್ತಿ ಹಾನಿ ತಡೆಗಟ್ಟಬಹುದು. ಪ್ರಕೃತಿ ವಿಕೋಪ ಸಂಭವಿಸುವುದನ್ನು ಮೊದಲೇ ಅರಿಯುವುದು ಕಷ್ಟವಾದರೂ ಮುನ್ನೆಚ್ಚರಿಕೆ ವಹಿಸಿದರೆ ಉಂಟಾಗಬಹುದಾದ ಅಪಾರ ಹಾನಿ ತಗ್ಗಿಸಬಹುದು~ ಎಂದರು.

`ವಿಕೋಪ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ 2005ರಲ್ಲಿ ಕಾಯ್ದೆ ರೂಪಿಸಿದೆ. ರಾಜ್ಯ ಸರ್ಕಾರ 2008ರಲ್ಲಿ ಈ ಕಾಯ್ದೆ ಸ್ವೀಕರಿಸಿದ್ದು, 2011ರಿಂದ ಅದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ~ ಎಂದರು.

ಕೇಂದ್ರ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಯೋಜನಾಧಿಕಾರಿ ಡಾ.ಮಹೇಂದ್ರ, ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರಾದ ಸಾವಿತ್ರಿ ಅಂಗಡಿ (ವಿಜಾಪುರ), ಶಾಂತವ್ವ ಭೂಸಣ್ಣವರ (ಬಾಗಲಕೋಟೆ), ಎಂ.ಎಸ್. ಪಾಟೀಲ (ಗದಗ), ಶಾಂತಾ ಕಲ್ಲೋಳಿಕರ (ಬೆಳಗಾವಿ), ಜಿಲ್ಲಾಧಿಕಾರಿಗಳಾದ ಶಿವಯೋಗಿ ಕಳಸದ (ವಿಜಾಪುರ), ಎ.ಎಂ. ಕುಂಜಪ್ಪ (ಬಾಗಲಕೋಟೆ), ಪಾಂಡುರಂಗ ನಾಯಕ (ಗದಗ), ಎಸ್ಪಿ ಡಾ.ಡಿ.ಸಿ. ರಾಜಪ್ಪ, ಕಾರವಾರ ಉಪ ವಿಭಾಗಾಧಿಕಾರಿ ಪುಷ್ಪಲತಾ, ಬೆಳಗಾವಿ ಜಿ.ಪಂ. ಉಪ ಕಾರ್ಯದರ್ಶಿ ಡಿ.ಎಂ. ಶಶಿಧರ, ಕಂದಾಯ ಇಲಾಖೆಯ ಉಪ ಕಾರ್ಯದರ್ಶಿ ಗಾಯಕವಾಡ ಇತರರು ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.