ADVERTISEMENT

ಪ್ರತಿಪಕ್ಷಗಳ ಹಗರಣ ಮಾರ್ಚ್‌ಗೆ ಬಹಿರಂಗ: ಸಿಎಂ

​ಪ್ರಜಾವಾಣಿ ವಾರ್ತೆ
Published 31 ಜನವರಿ 2011, 16:40 IST
Last Updated 31 ಜನವರಿ 2011, 16:40 IST
ಪ್ರತಿಪಕ್ಷಗಳ ಹಗರಣ ಮಾರ್ಚ್‌ಗೆ ಬಹಿರಂಗ: ಸಿಎಂ
ಪ್ರತಿಪಕ್ಷಗಳ ಹಗರಣ ಮಾರ್ಚ್‌ಗೆ ಬಹಿರಂಗ: ಸಿಎಂ   

ತುಮಕೂರು:  ‘ಫೆಬ್ರುವರಿಯಲ್ಲಿ ಬಜೆಟ್ ಮಂಡಿಸಿ, ಮಾರ್ಚ್ ತಿಂಗಳಲ್ಲಿ ಪ್ರತಿ ಪಕ್ಷದವರ ಎಲ್ಲ ಹಗರಣಗಳನ್ನು ಜನತೆಯ ಮುಂದೆ ಬಿಚ್ಚಿಡುತ್ತೇನೆ’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗುಡುಗಿದ್ದಾರೆ.

ನಗರದ ಮಹತ್ಮಾಗಾಂಧಿ ಕ್ರೀಡಾಂಗಣದ ಹೆಲಿಪ್ಯಾಡ್‌ನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಪ್ರತಿಪಕ್ಷಗಳು ಅವರ ಕೆಲಸ ಮಾಡುತ್ತಿವೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಫೆಬ್ರುವರಿಯಲ್ಲಿ ಬಜೆಟ್ ಮಂಡಿಸಿ, ಮಾರ್ಚ್‌ನಲ್ಲಿ ಪ್ರತಿ ಪಕ್ಷಗಳ ಹಗರಣಗಳೆಲ್ಲವನ್ನು ಬಿಚ್ಚಿಡುತ್ತೇನೆ. ಅಷ್ಟೆ ಅಲ್ಲ; ಒಂದು ತಿಂಗಳು ಇಡೀ ರಾಜ್ಯ ಪ್ರವಾಸ ಮಾಡಿ, ಅವರ ಹಗರಣಗಳನ್ನು ಮನೆಮನೆಗೂ ತಲುಪಿಸುತ್ತೇನೆ’ ಎಂದು ಕಿಡಿಕಾರಿದರು.

ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಹೆಲಿಕಾಪ್ಟರ್‌ನಲ್ಲಿ ಹೊರಟಿದ್ದ ಮುಖ್ಯಮಂತ್ರಿ, ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯನ್ನು ತಮ್ಮೊಂದಿಗೆ ಕರೆದೊಯ್ಯಲು ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸ್ವಾಮೀಜಿಯನ್ನು ಮುಖ್ಯಮಂತ್ರಿ ಹೆಲಿಕಾಪ್ಟರ್‌ನಲ್ಲಿಯೇ ಕರೆತಂದು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಇಳಿಸಿ ಹೋದರು. ಗೃಹ ಸಚಿವ ಆರ್.ಅಶೋಕ್ ಮುಖ್ಯಮಂತ್ರಿ ಜತೆಗಿದ್ದರು.

ಕಟ್ಟಪ್ಪಣೆಗೆ ಸಿಎಂ ತಿಲಾಂಜಲಿ! 11 ತಿಂಗಳ ಹಿಂದೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಠದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ‘ಸ್ವಾಮೀಜಿ ಆರೋಗ್ಯದ ದೃಷ್ಟಿ ಮತ್ತು ಸ್ವಾಮೀಜಿಯವರ ಆಶೀರ್ವಾದ ಹೆಚ್ಚು ಕಾಲ ಭಕ್ತರಿಗೆ ಬೇಕಿರುವುದರಿಂದ ಯಾರೊಬ್ಬರು ಕಾರ್ಯಕ್ರಮ ಅಥವಾ ಪಾದಪೂಜೆಗೆ ಕರೆದೊಯ್ಯಬಾರದು. ಅಲ್ಲದೆ ಪಾದ ಸ್ಪರ್ಶಿಸಿ ನಮಸ್ಕರಿಸಬಾರದು’ ಎಂದು ಕಟ್ಟಪ್ಪಣೆ ಮಾಡಿದ್ದರು. ಸ್ವತಃ ಮುಖ್ಯಮಂತ್ರಿಗಳೇ ವರ್ಷ ತುಂಬುವುದರೊಳಗೆ ತಾವೇ ಮಾಡಿದ್ದ ಕಟ್ಟಪ್ಪಣೆ ಮುರಿದು, ಸ್ವಾಮೀಜಿಯವರನ್ನು ಸುತ್ತೂರು ಜಾತ್ರೆಗೆ ಕರೆದೊಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.