ರಾಯಚೂರು: ಮುಂಬೈ- ಕನ್ಯಾಕುಮಾರಿ (ನಾಗರಕೊಯಿಲ್ ಎಕ್ಸ್ಪ್ರೆಸ್) ರೈಲಿನಲ್ಲಿ ಪ್ರಯಾಣಿಕರ ಜೇಬು ಕತ್ತರಿಸಿ ಸುಮಾರು ಎರಡು ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾದ ಘಟನೆ ವಾಡಿ- ಕೃಷ್ಣಾ ರೈಲು ನಿಲ್ದಾಣಗಳ ನಡುವೆ ಶುಕ್ರವಾರ ಬೆಳಗಿನ ಜಾವ 1.30ರ ವೇಳೆಗೆ ನಡೆದಿದೆ.
ವಾಡಿ ನಿಲ್ದಾಣದಲ್ಲಿ ಈ ರೈಲನ್ನು ಹತ್ತಿದ ಮೂವರು ರಾಯಚೂರು ಸಮೀಪದ ಕೃಷ್ಣಾ ರೈಲು ನಿಲ್ದಾಣ ತಲುಪುವುದರೊಳಗೆ ಈ ಕೃತ್ಯ ನಡೆಸಿದ್ದಾರೆ. ರೈಲಿನ ಎಸ್-1, ಎಸ್-5, ಎಸ್-8 ಹಾಗೂ ಎಸ್-9 ಬೋಗಿಗಳಲ್ಲಿನ ಸುಮಾರು 20ರಿಂದ 25 ಜನ ಪ್ರಯಾಣಿಕರ ಜೇಬು ಕತ್ತರಿಸಿ ಸಿಕ್ಕಷ್ಟು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಕೃಷ್ಣಾ ರೈಲು ನಿಲ್ದಾಣ ಬಂದಾಗ ಎಚ್ಚರಗೊಂಡ ಒಬ್ಬ ಪ್ರಯಾಣಿಕ ಜೇಬು ನೋಡಿಕೊಂಡಾಗ ಕತ್ತರಿಸಿದ್ದು ಗೊತ್ತಾಗಿದೆ. ಸಹ ಪ್ರಯಾಣಿಕರ ಗಮನ ಸೆಳೆದಾಗ ಅವರ ಸ್ಥಿತಿಯೂ ಅದೇ ಆಗಿದ್ದರಿಂದ ಗಾಬರಿಗೊಂಡಿದ್ದಾರೆ. ಈ ಕೃತ್ಯ ಎಸಗಿದವರ ಪತ್ತೆಗೆ ಅಕ್ಕಪಕ್ಕದ ಬೋಗಿಗಳಲ್ಲಿ ಮುಂದಾದರು. ಆ ವೇಳೆಗೆ ಕೃಷ್ಣಾ ರೈಲು ನಿಲ್ದಾಣ ಬಂದುದರಿಂದ ರೈಲು ನಿಧಾನವಾಗಿ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ ಮೂವರು ರೈಲಿನಿಂದ ಇಳಿದು ಪರಾರಿಯಾದರು ಎಂದು ಪ್ರಯಾಣಿಕರು ರಾಯಚೂರು ರೈಲ್ವೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಹಣ ಕಳೆದುಕೊಂಡ ಜಗದೀಶ ಎಂಬುವವರು ರೈಲ್ವೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.ಘಟನೆ ಹಿನ್ನೆಲೆಯಲ್ಲಿ ಪ್ರಯಾಣಿಕರು ರಾಯಚೂರು ನಿಲ್ದಾಣ ಬಳಿ ಚೈನ್ ಎಳೆದು ರೈಲು ನಿಲ್ಲಿಸಿದ್ದಾರೆ. ಪೊಲೀಸ್ ಭದ್ರತಾ ಲೋಪದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ತುರ್ತು ನೆರವಿಗೆ ಮನವಿ ಮಾಡಿದರು.ಸ್ಥಳಕ್ಕೆ ಧಾವಿಸಿ ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ನೀಲಮ್ಮ, ಸಿಪಿಐ ಪಾಷಾ ಪ್ರಯಾಣಿಕರ ಮನ ಒಲಿಸಿದರು. ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಿ ಜಾಲ ಬೀಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.