ADVERTISEMENT

ಬದುಕಿಗೆ ಭೈರವಿ ಹಾಡಿದವರು...

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 11:00 IST
Last Updated 25 ಜನವರಿ 2011, 11:00 IST

ಹುಬ್ಬಳ್ಳಿ: ಹಿಂದೂಸ್ತಾನಿ ಗಾಯಕ, ಭಾರತ್ನ ರತ್ನ ಪುರಸ್ಕೃತ ಭೀಮಸೇನ ಜೋಶಿ ನಿಧನಕ್ಕೆ ನಗರದ ಕಲಾವಿದರು, ಗಣ್ಯರು, ಸಂಘ- ಸಂಸ್ಥೆಗಳ ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.ಮಹಾನ್ ಗಾಯಕನನ್ನು ಕಳೆದುಕೊಳ್ಳುವ ಮೂಲಕ ಸಂಗೀತ ಲೋಕ ಹಾಗೂ ನಮಗೆಲ್ಲರಿಗೂ ಅನಾಥ ಭಾವ ಉಂಟಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಕಂಬನಿ ಮಿಡಿದಿದ್ದಾರೆ.

ಈಚೆಗೆ ಖ್ಯಾತ ಗಾಯಕಿ ಗಂಗೂಬಾಯಿ ಹಾನಗಲ್ ನಮ್ಮನ್ನಗಲಿದ ದುಃಖ ಮರೆಯುವ ಮುನ್ನವೇ ಮತ್ತೊಬ್ಬ ಮಹಾನ್ ಗಾಯಕನ ಅಗಲಿಕೆಯು ಸಂಗೀತ ಪ್ರಪಂಚಕ್ಕೆ ತುಂಬಲಾರದ ನಷ್ಟವಾಗಿದೆ ಎಂದೂ ಅವರು ವಿಷಾದಿಸಿದ್ದಾರೆ. ಪಂ. ಜೋಶಿ ನಿಧನದಿಂದಾಗಿ ಹಿಂದೂಸ್ತಾನಿ ಸಂಗೀತ ಲೋಕಕ್ಕೆ ತುಂಬಿಬಾರದ ಹಾನಿಯಾಗಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಶೋಕ ವ್ಯಕ್ತಪಡಿಸಿದ್ದಾರೆ.

ಜೋಶಿ ಅಗಲಿಕೆಯಿಂದಾಗಿ ಭಾರತೀಯ ಸಂಗೀತ ಪರಂಪರೆ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ ದುಃಖ ವ್ಯಕ್ತಪಡಿಸಿದ್ದಾರೆ.ಸಂಗೀತಗಾರರಾದ ಶ್ರೀಪತಿ ಪಾಡಿಗಾರ, ಪಂ. ರಘುನಾಥ ನಾಕೋಡ, ರೇಣುಕಾ ನಾಕೋಡ, ಗಂಗೂಬಾಯಿ ಹಾನಗಲ್ ಮ್ಯುಸಿಕ್ ಫೌಂಡೇಶನ್ ಅಧ್ಯಕ್ಷ ಮನೋಜ್ ಹಾನಗಲ್, ಹುಬ್ಬಳ್ಳಿ ಆರ್ಟ್ ಸರ್ಕಲ್‌ನ ಬಾಬುರಾವ್ ಹಾನಗಲ್, ವಿಧಾನ ಪರಿಷತ್ ಸದಸ್ಯರಾದ ಮೋಹನ ಲಿಂಬಿಕಾಯಿ, ಶ್ರೀನಿವಾಸ ಮಾನೆ, ಮಾಜಿ ಸಚಿವ ಎ.ಎಂ.ಹಿಂಡಸಗೇರಿ,  ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎಂ.ಸಿ.ಹಿರೇಮಠ ಹಾಗೂ ಇತರ ಪದಾಧಿಕಾರಿಗಳು ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ.

ಸಂಗೀತ ಕಲಾ ಮಂಡಳ: ನವನಗರ ಸಂಗೀತ ಕಲಾ ಮಂಡಳದವರು ಸೋಮವಾರ ಸಭೆ ಸೇರಿ ಶ್ರದ್ಧಾಂಜಲಿ ಸಲ್ಲಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಡಳ ಅಧ್ಯಕ್ಷ ಎಂ.ಆರ್.ಪುರಂದರೆ ಅವರು, ಜೋಶಿ ನಿಧನದಿಂದ ಸಂಗೀತ ಕ್ಷೇತ್ರ ಬಡವಾಗಿದೆ ಎಂದು ವಿಷಾದಿಸಿದರು. ವಿಡಿಯೋಗ್ರಾಫರ್ಸ್‌ ಸಂಘ: ಹುಬ್ಬಳ್ಳಿ ಫೋಟೋ ಹಾಗೂ ವಿಡಿಯೋಗ್ರಾಫರ್ಸ್‌ ಸಂಘದ ಸದಸ್ಯರು ಸಭೆ ಸೇರಿ ಜೋಶಿ ನಿಧನಕ್ಕೆ ಸಂತಾಪ ಸೂಚಿಸಿದರು.

ಸಂಘದ ಅಧ್ಯಕ್ಷ ಇಂದೂಧರ ಸಾಲಿ, ಉಪಾಧ್ಯಕ್ಷ ಕಿರಣ ಬಾಕಳೆ, ಕಾರ್ಯದರ್ಶಿ ವೆಂಕಟೇಶ ಹಬೀಬ, ಬಸವರಾಜ ಅಣ್ಣಿಗೇರಿ, ಅನಿಲ ತುರಮುರಿ, ದಿನೇಶ ದಾಬಡೆ, ಗುರುರಾಜ ಕುಲಕರ್ಣಿ ಇತರರು ಸಭೆಯಲ್ಲಿ ಭಾಗವಹಿಸಿದ್ದರು. ಸಾಹಿತ್ಯಿಕ ಸಂಘ: ಶ್ರೀ ಮರುಳಸಿದ್ಧಸ್ವಾಮಿಗಳ ಸಾಹಿತ್ಯಿಕ ಸಂಘವು ಶ್ರದ್ಧಾಂಜಲಿ ಸಲ್ಲಿಸಿತು. ಜೋಶಿ ಹಾಡಿದ ಪದಗಳನ್ನು ವಿವಿಧ ಕಲಾವಿದರು ಹಾಡಿ ಸ್ವರ ಶ್ರದ್ಧಾಂಜಲಿ ಅರ್ಪಿಸಿದರು.

ಮರೋಳ ಹಿರೇಮಠದ ಪತ್ರಯ್ಯ ಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಸಂಘದ ಕಾರ್ಯದರ್ಶಿಯಾದ ಶಾರದಾ ಹಿರೇಮಠ, ಬಿ.ಎ. ಭಿಕ್ಷಾವರ್ತಿಮಠ, ಎಸ್.ಎಸ್.ಎಂ. ಹಿರೇಮಠ, ಶಿವಶರಣ ತಳವಾರ, ನಿಂಗಪ್ಪ ಜಕ್ಕಲಿ, ಬಸವರಾಜ ಹಾಳಕೇರಿಮಠ, ಶ್ರೀದೇವಿ ಹಿರೇಮಠ, ಎಸ್.ಪಿ. ಹಿರೇಮಠ ಮೊದಲಾದವರು ಪಾಲ್ಗೊಂಡಿದ್ದರು. ಸಾಂಸ್ಕೃತಿಕ ಸಂಘ: ಲಿಂ. ಶ್ರೀ ವೇ. ಬಸವಲಿಂಗ ಶಿವಾಚಾರ್ಯರ ಸಾಂಸ್ಕೃತಿಕ ಸಂಘದ ಸದಸ್ಯರು ಸಭೆ ಸೇರಿ ಜೋಶಿ ನಿಧನಕ್ಕೆ ಸಂತಾಪ ಸೂಚಿಸಿದರು.

ಎಂ.ಜಿ.ಹಿರೇಮಠ, ಸುಜಾತಾ ಹಿರೇಮಠ, ಪ್ರವೀಣಸ್ವಾಮಿ ಚನ್ನಾಪೂರಮಠ, ಬಸವರಾಜ ಮಾಸಣಗಿ, ಬಸವರಾಜ ಪ್ಯಾಟಿಶೆಟ್ಟರ, ಸಿದ್ಧಲಿಂಗೇಶ ಹಿರೇಮಠ, ಶರಣಮ್ಮ ಪ್ಯಾಟಿಶೆಟ್ಟರ, ಶಾರದಾ ಬಸವರಾಜ ಮಾಸಣಗಿ, ಸುಮಂಗಲಾ ಬಂಗಾರಿಮಠ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು. ಪಂ. ಭೀಮಸೇನ ಜೋಶಿಯವರು ಕಿರಾಣಾ ಘರಾಣೆಯನ್ನು ಮುಂದುವರಿಸಿಕೊಂಡು ಬಂದವರು ಎಂದು ಜ್ಞಾನ ಭಾರತಿ ಸಂಸ್ಥೆ ಕಂಬನಿ ಮಿಡಿದಿದೆ.

ಗಾಯನ, ಭಾವಗೀತೆ, ಭಜನೆ, ಠುಮರಿ, ದಾಸರಪದ ಮೊದಲಾದ ಪ್ರದರ್ಶನಗಳಲ್ಲಿ ಸಮನಾದ ಪ್ರಾವೀಣ್ಯತೆ ಮೆರೆದರು ಎಂದು ಜ್ಞಾನಭಾರತಿ ವ್ಯವಸ್ಥಾಪಕ ನಿರ್ದೇಶಕ ಪಂ. ವೆಂಕಟೇಶ ಮಣೂರ ಹಾಗೂ ಅಧ್ಯಕ್ಷ ಮುರಾರಿಲಾಲ್ ಬಿದಾಸಾರಿಯಾ ಎಂದು ಹೇಳಿದ್ದಾರೆ. ನಗರದ ಸಿದ್ಧಾರೂಢಸ್ವಾಮಿ ಮಠದ ಟ್ರಸ್ಟ್ ಕಮಿಟಿ ಹಾಗೂ ಭಕ್ತರ ವತಿಯಿಂದ ಸಂತಾಪ ಸೂಚಿಸಲಾಯಿತು. ಕಮಿಟಿ ಗೌರವ ಕಾರ್ಯದರ್ಶಿ ರಂಗಾ ಬದ್ದಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಕಂಠಿ ಸಂತಾಪ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.