ADVERTISEMENT

ಬನ್ನೇರುಘಟ್ಟಕ್ಕೆ ಎಂಟು ಚಿರತೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2010, 6:00 IST
Last Updated 23 ಡಿಸೆಂಬರ್ 2010, 6:00 IST

ಬೆಂಗಳೂರು: ದಕ್ಷಿಣ ಆಫ್ರಿಕದಿಂದ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಆಗಮಿಸಲಿರುವ ಚೀತಾಗಳಿಗೆ ಸ್ಥಳಾವಕಾಶ ಮಾಡಿಕೊಡುವ ಉದ್ದೇಶದಿಂದ ಎಂಟು ಚಿರತೆಗಳನ್ನು ತಾತ್ಕಾಲಿಕವಾಗಿ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಬುಧವಾರ ಸ್ಥಳಾಂತರಿಸಲಾಯಿತು.

ಜರ್ಮನಿಯ ಲಿಪ್‌ಜಿಗ್ ಪ್ರಾಣಿ ಸಂಗ್ರಹಾಲಯದ ಸಹಕಾರದಿಂದ ಎರಡು ಜೊತೆ ಆಫ್ರಿಕನ್ ಚೀತಾಗಳು ಜನವರಿ ಮೊದಲ ವಾರದಲ್ಲಿ ಮೈಸೂರಿಗೆ ಆಗಮಿಸಲಿವೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಸೂಚನೆಯ ಪ್ರಕಾರ ಈ ಪ್ರಾಣಿಗಳಿಗೆ ವಿಶೇಷ ಆವರಣವನ್ನು ನಿರ್ಮಿಸಬೇಕಾಗಿದೆ. ಇದಕ್ಕಾಗಿ ರೂ 45 ಲಕ್ಷಗಳ ಯೋಜನೆ ಸಿದ್ದವಾಗಿದೆ. ಆದರೆ ಸ್ಥಳೀಯ ಸಂಸ್ಥೆ ಚುನಾವಣೆಯ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಕಾಮಗಾರಿಗಾಗಿ ಟೆಂಡರ್ ಕರೆಯುವುದು ಸಾಧ್ಯವಾಗಿಲ್ಲ.

ಆದರೆ ಜನವರಿ ಮೊದಲ/ಎರಡನೇ ವಾರದಲ್ಲಿ ಚೀತಾಗಳು ಆಗಮಿಸಿದರೆ ತೊಂದರೆಯಾಗಬಹುದು ಎನ್ನುವ ಕಾರಣದಿಂದ ತಾತ್ಕಾಲಿಕವಾಗಿ ಚಿರತೆಗಳನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಸ್ಥಳಾಂತರಿಸಲಾಯಿತು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎನ್.ಜಯಕುಮಾರ್ ತಿಳಿಸಿದರು.

ಚೀತಾಗಳನ್ನು ಮುಂದಿನ ದಿನಗಳಲ್ಲಿ ಹೇಸರಗತ್ತೆ ಆವರಣದಲ್ಲಿ ಆರಿಸಲಾಗುತ್ತದೆ.ಹೊಸದಾಗಿ ಆವರಣ ನಿರ್ಮಿಸಲು ಕನಿಷ್ಠ ಮೂರು ತಿಂಗಳ ಕಾಲ ಬೇಕಾಗುತ್ತದೆ. ಈ ಆವರಣ ನಿರ್ಮಾಣದ ನಂತರ ಚಿರತೆಗಳನ್ನು ವಾಪಸ್ ಕರೆಸಿಕೊಳ್ಳುತ್ತೇವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.