ADVERTISEMENT

ಬರಿಗಾಲಲ್ಲಿ ತೆರಳಿದ ಮುಖ್ಯಮಂತ್ರಿ!

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 19:30 IST
Last Updated 8 ಫೆಬ್ರುವರಿ 2012, 19:30 IST

ತಿಪಟೂರು: ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಬೇರೊಬ್ಬರ ಒಂದು ಚಪ್ಪಲಿ, ತಮ್ಮ ಕಾಲಿನ ಒಂದು ಚಪ್ಪಲಿ ಹಾಕಿಕೊಂಡು ಬಂದು ಕಡೆಗೆ ಎರಡನ್ನೂ ಬಿಟ್ಟು ಬರಿಗಾಲಲ್ಲಿ ತೆರಳಿದ ಘಟನೆ ನಗರದಲ್ಲಿ ನಡೆಯಿತು.
ಕಡೂರಿನಿಂದ ಬೆಂಗಳೂರಿಗೆ ಮರಳುವಾಗ ಮಾರ್ಗ ಮಧ್ಯೆ ಶಾಸಕ ಬಿ.ಸಿ.ನಾಗೇಶ್ ಮನೆಗೆ ಮಂಗಳವಾರ ರಾತ್ರಿ 9.45ರಲ್ಲಿ ಭೇಟಿ ನೀಡಿ ಊಟ ಮಾಡಿದರು. ಶಾಸಕರ ಮನೆ ಪ್ರವೇಶಿಸುವ ಮುನ್ನ ವರಾಂಡ ಬಳಿ ಚಪ್ಪಲಿ ಬಿಟ್ಟಿದ್ದರು.
 
ಅದರ ಪಕ್ಕದಲ್ಲಿ ಸಚಿವ ಬಸವರಾಜ ಬೊಮ್ಮೋಯಿ ಅವರ ಚಪ್ಪಲಿ ಇದ್ದವು. ಉಳಿದವರ ಚಪ್ಪಲಿಗಳು ಸ್ವಲ್ಪ ದೂರದಲ್ಲಿದ್ದವು. ಸಚಿವರಾದ ಸುರೇಶ್‌ಕುಮಾರ್, ಬೊಮ್ಮೋಯಿ, ಶಾಸಕ ಸಿ.ಟಿ.ರವಿ ಅವರೊಂದಿಗೆ ಆಗಮಿಸಿದ್ದ ಮುಖ್ಯಮಂತ್ರಿ ಮುಖದಲ್ಲಿ ಎಂದಿನ ನಗು ಕಾಣಲಿಲ್ಲ. ಶಾಸಕರ ಮನೆ ಪ್ರವೇಶ ದ್ವಾರದಲ್ಲೇ ಮಾಧ್ಯಮದವರು ಎದುರಾದ ತಕ್ಷಣ ಬೇಸರದ ನೋಟ ಬೀರಿದರು. ಸದನಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಮೊದಲೇ ನಿರೀಕ್ಷಿಸಿದ್ದ ಅವರು, ನನಗಿನ್ನೂ ಆ ಬಗ್ಗೆ ವಿವರ ತಿಳಿದಿಲ್ಲ. ಪರಿಶೀಲಿಸಿದ ನಂತರವಷ್ಟೇ ಪ್ರತಿಕ್ರಿಯೆ ಎಂದು ಹೇಳಿ ಊಟದ ಕೋಣೆ ಸೇರಿದರು.

ಊಟ ಮುಗಿಸಿದ ಮುಖ್ಯಮಂತ್ರಿ ಹೊರಬಂದು ಚಪ್ಪಲಿ ಹಾಕಿಕೊಳ್ಳಲು ಮುಂದಾದರು. ಚಪ್ಪಲಿಗೆ ಕಾಲಿಟ್ಟ ಅವರು ಏನೋ ಯಡವಟ್ಟು ಆದಂತೆ ಮತ್ತೆ ತೆಗೆದು ನೋಡಿದರೆ, ಎರಡೂ ಬಲಗಾಲಿನ ಚಪ್ಪಲಿಯಾಗಿದ್ದವು. ನೋಡಲು ಒಂದೇ ರೀತಿ ಇದ್ದ ಅವು ವಿನ್ಯಾಸದಲ್ಲಿ ಸ್ವಲ್ಪ ಭಿನ್ನವಾಗಿದ್ದವು. ಅದಾಗಲೇ ಚಪ್ಪಲಿ ಹಾಕಿಕೊಂಡಿದ್ದ ಬೊಮ್ಮೋಯಿ ಅವರನ್ನು ಕರೆದ ಸಿಎಂ ಚಪ್ಪಲಿ ಪರೀಕ್ಷಿಸಿದರು. ಅವು ಅವರದ್ದೇ ಆಗಿದ್ದವು. ಚಪ್ಪಲಿ ಗೊಂದಲದಿಂದ ಮುಖ್ಯಮಂತ್ರಿ ಕಸಿವಿಸಿಗೊಂಡಿದ್ದರಿಂದ ಪಕ್ಕದಲ್ಲಿದ್ದ ಪೊಲೀಸರು ತಡಬಡಾಯಿಸಿದರು. ಕೊನೆಗೆ ಬರಿಗಾಲಲ್ಲೇ ಕಾರು ಹತ್ತಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.