ADVERTISEMENT

ಬರ: 18 ರಂದು ರೈತ ಸಂಘ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2012, 19:30 IST
Last Updated 14 ಜೂನ್ 2012, 19:30 IST

ಬಾಗಲಕೋಟೆ:  ಬರಗಾಲ ನಿರ್ವಹಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ, ಭೂಸ್ವಾಧೀನ ವಿರೋಧಿಸಿ ಮತ್ತು ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇದೇ 18ರಂದು ಬೆಳಿಗ್ಗೆ 11ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ತಿಳಿಸಿದ್ದಾರೆ.

ಮುಂಗಾರು ಕುಂಠಿತದಿಂದ ಬರಗಾಲ ದಟ್ಟವಾಗುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರ ಬರಗಾಲ ಎದುರಿಸಲು ಸರ್ವ ಸನ್ನದ್ಧವಾಗುವಂತೆ ಎಚ್ಚರಿಕೆ ನೀಡುವ ಉದ್ದೇಶದಿಂದ ಪ್ರತಿಭಟನೆ ನಡೆಸುತ್ತಿರುವುದಾಗಿ ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬಿತ್ತನೆ ಸ್ಥಗಿತ:
ಮುಂಗಾರು ಕುಂಠಿತವಾಗಿರುವುದರಿಂದ ರಾಜ್ಯದಾದ್ಯಂತ ಬಿತ್ತನೆ ಸಂಪೂರ್ಣವಾಗಿ ಸ್ಥಗಿತವಾಗಿದೆ, ಪರಿಣಾಮ ಮುಂದಿನ ದಿನಗಳಲ್ಲಿ ಅನ್ನ, ಆಹಾರ, ಮೇವು, ನೀರಿನ ಸಮಸ್ಯೆ ತೀವ್ರವಾಗಿ ಜನತೆ ಗುಳೇ ಹೋಗುವ ಸಾಧ್ಯತೆ ದಟ್ಟವಾಗಿದೆ ಆದರೆ, ರಾಜ್ಯ ಸರ್ಕಾರ ಇದುವರೆಗೂ ಯಾವುದೇ ಮುಂಜಾಗ್ರತೆ ಕ್ರಮಕೈಗೊಂಡಿಲ್ಲ ಎಂದು ದೂರಿದರು.

ಬೆಂಬಲ ಬೆಲೆ: ಕಬ್ಬು, ಶುಂಠಿ, ಅರಿಶಿಣ, ಈರುಳ್ಳಿ, ರೇಷ್ಮೆ, ತೆಂಗು, ಹತ್ತಿ, ಅಡಿಕೆ ಮಾರುಕಟ್ಟೆ ಸಂಪೂರ್ಣ ಬಿದ್ದುಹೋಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಸರ್ಕಾರ ತಕ್ಷಣ ಮಧ್ಯ ಪ್ರವೇಶಿಸಿ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಿಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಇನ್ನು ಮುಂದೆ ಕೈಗಾರಿಕೆ ಸ್ಥಾಪನೆಗಾಗಿ ರೈತರಿಂದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ಬದಲು ಅವರಿಂದ ಭೂಮಿಯನ್ನು ಬಾಡಿಗೆಗೆ (ಲೀಜ್) ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರತಿ 30 ವರ್ಷಕ್ಕೊಮ್ಮೆ ಬಾಡಿಗೆಯನ್ನು ಪುನರ್‌ಪರಿಶೀಲಿಸಬೇಕು, ಆಗ ರೈತನಿಗೂ ನ್ಯಾಯ ಸಿಗುತ್ತದೆ, ಶುದ್ಧ ಕ್ರಯಕ್ಕೆ ಭೂಮಿಯನ್ನು ಖರೀದಿಸಬಾರದು, ಭೂಮಿ ರೈತನ ಬಳಿಯೇ ಇರುವಂತೆ ಮಾಡಬೇಕು, ಈ ಸಂಬಂಧ ಹೊಸ ನೀತಿ ನಿರೂಪಣೆ ಮಾಡಬೇಕು ಎಂದು ಹೇಳಿದರು.

`ಜಿಮ್~ ಬೋಗಸ್: ಬಂಡವಾಳ ಹೂಡಿಕೆ ಉದ್ದೇಶದಿಂದ ನಡೆಸಲಾಗಿರುವ `ಜಿಮ್~ ರೈತರ ದಿಕ್ಕು ತಪ್ಪಿಸುವ `ರಿಯಲ್ ಎಸ್ಟೇಟ್~ ದಂಧೆಯಾಗಿದೆ ಎಂದು ಕೋಡಿಹಳ್ಳಿ ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.