ಬಳ್ಳಾರಿ: ನಗರದ ರಾಘವ ಕಲಾಮಂದಿರದಲ್ಲಿ ರಂಗತೋರಣ ಸಂಸ್ಥೆ ಆಯೋಜಿಸಿರುವ ಮೂರು ದಿನಗಳ ರಾಜ್ಯ ಮಟ್ಟದ ವಿದ್ಯಾರ್ಥಿ ನಾಟಕೋತ್ಸವದ ಅಂಗವಾಗಿ ಶನಿವಾರ ಸಂಜೆ ಸ್ಥಳೀಯ ಹೀರದ ಸೂಗಮ್ಮ ಕಲ್ಯಾಣ ಮಂಟಪದಿಂದ ಹೊರಟ ರಂಗ ಶೋಭಾಯಾತ್ರೆ ಜನಮನ ರಂಜಿಸಿತು.
ನಾಟಕೋತ್ಸವದಲ್ಲಿ ರಾಜ್ಯದ ವಿವಿಧ ಕಾಲೇಜುಗಳ 22 ತಂಡಗಳು ವಿಶಿಷ್ಟ ವೇಷ ಧರಿಸಿ ಭಾಗವಹಿಸಿದ ಯಾತ್ರೆಗೆ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅರುಣಾ ತಿಪ್ಪಾರೆಡ್ಡಿ ಚಾಲನೆ ನೀಡಿದರು.
ಬೆಂಗಳೂರು ರಸ್ತೆಯ ಮೂಲಕ ಆಗಮಿಸಿದ ಯಾತ್ರೆಯಲ್ಲಿ ಗಜರಾಜನ ಸಾರಥ್ಯವಿದ್ದರೆ, ಕಲಾವಿದರು ಪರಿಸರ ಸಂರಕ್ಷಣೆ, ಭ್ರಷ್ಟಾಚಾರ, ಆರೋಗ್ಯ ರಕ್ಷಣೆ, ನಾಡಿನ ಕಲೆ, ಸಂಸ್ಕೃತಿ ಪರಂಪರೆಯ ಕುರಿತು ಜಾಗೃತಿ ಮೂಡಿಸುವ ವೇಷಭೂಷಣ ಮತ್ತು ಭಿತ್ತಿಪತ್ರಗಳೊಂದಿಗೆ ಗಮನ ಸೆಳೆದರು.
ಕಂಸಾಳೆ, ಕರಡಿಕುಣಿತ, ಡೊಳ್ಳು ಕುಣಿತ, ನಂದಿಕೋಲು, ಸಮಾಳ ಪ್ರದರ್ಶಿಸಿದ ವಿವಿಧ ಜನಪದ ಕಲಾ ತಂಡಗಳ ಕಲಾವಿದರು ಯಾತ್ರೆಗೆ ಕಳೆ ಕಟ್ಟಿದರು. ಮೂರು ಕಿಲೋಮೀಟರ್ವರೆಗೆ ತೆರಳಿದ ಯಾತ್ರೆಯು, ಗಡಿಗಿ ಚೆನ್ನಪ್ಪ ವೃತ್ತದ ಮೂಲಕ ರಾಘವ ಕಲಾಮಂದಿರ ತಲುಪಿ ಸಮಾರೋಪಗೊಂಡಿತು.
ನಾಟಕೋತ್ಸವದಲ್ಲಿ ಪಾಲ್ಗೊಂಡ ಪ್ರತಿ ತಂಡವೂ ಶೋಭಾಯಾತ್ರೆಯಲ್ಲಿ ಭಾಗವಹಿಸುವುದು ಕಡ್ಡಾಯ. ಅಲ್ಲದೆ, ಶೋಭಾ ಯಾತ್ರೆಯಲ್ಲಿ ಭಾಗವಹಿಸಿ ಗಮನ ಸೆಳೆದ ತಂಡಗಳಿಗೆ ಮೂರು ವಿಶೇಷ ಬಹುಮಾನ ನೀಡಲಾಗುತ್ತಿದ್ದು, ಪ್ರತಿ ತಂಡಗಳೂ ಕ್ರಿಯಾಶೀಲತೆಯೊಂದಿಗೇ ರಂಗ ಚಟುವಟಿಕೆಗಳ ಬಗ್ಗೆ ತಿಳಿವಳಿಕೆ ಮೂಡಿಸುವ ಮೂಲಕ ಸಾಮಾಜಿಕ ಕಳಕಳಿಯನ್ನೂ ವ್ಯಕ್ತಪಡಿಸಿದ್ದು ವಿಶೇಷವಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.