ಗೋಣಿಕೊಪ್ಪಲು: ಆಹಾರ ಹುಡುಕಿಕೊಂಡು ಕಾಫಿ ತೋಟಕ್ಕೆ ಬಂದ ಕಾಡಾನೆಯೊಂದು ಪಾಳು ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ದೇವರಪುರ ಸಮೀಪದ ಹೆಬ್ಬಾಲೆ ಭದ್ರಗೋಳದಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಪೆಮ್ಮಂಡ ಮಾಚಯ್ಯ ಅವರ ಕಾಫಿ ತೋಟದಲ್ಲಿ ಪಾಳು ಬಿದ್ದ ಸುಮಾರು 25 ಅಡಿ ಆಳದ ಬಾವಿಗೆ ಕಾಡಾನೆಯು ಕಾಲು ಜಾರಿ ಬಿದ್ದಿದೆ ಎನ್ನಲಾಗಿದ್ದು, ಸೋಮವಾರ ಬೆಳಿಗ್ಗೆ ಪತ್ತೆಯಾಗಿದೆ.
ನೀರಿಲ್ಲದ ಬಾವಿಯ ಸುತ್ತ ತಂತಿ ಬೇಲಿ ಇದ್ದರೂ ಅದನ್ನು ಆನೆ ದಾಟಿ ಹೋಗಿರುವುದು ಅಚ್ಚರಿ ಮೂಡಿಸಿದೆ. ಅಂದಾಜು 25 ವರ್ಷದ ಈ ಹೆಣ್ಣಾನೆಯನ್ನು ಮಂಗಳವಾರ ಬಾವಿಯಿಂದ ಹೊರತೆಗೆದು ಶವ ಪರೀಕ್ಷೆ ನಡೆಸಲಾಗುವುದು ಎಂದು ತಿತಿಮತಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಪ್ಪ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.