ADVERTISEMENT

ಬಿಸಿಯೂಟ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 19:30 IST
Last Updated 1 ಅಕ್ಟೋಬರ್ 2011, 19:30 IST

ಶಿವಮೊಗ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಸಿಯೂಟ ಯೋಜನೆಯ ಕಾರ್ಯಕರ್ತೆಯರು ಕರ್ನಾಟಕ ಅಕ್ಷರ ದಾಸೋಹ ಬಿಸಿಯೂಟ ಕಾರ್ಯಕರ್ತೆಯರ ಒಕ್ಕೂಟದ ನೇತೃತ್ವದಲ್ಲಿ ನಗರದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸೈನ್ಸ್ ಮೈದಾನದಿಂದ ಜಿಲ್ಲಾ ಪಂಚಾಯ್ತಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ ಕಾರ್ಯಕರ್ತೆಯರು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಮನವಿ ಸಲ್ಲಿಸಿದರು.

ಬಿಸಿಯೂಟ ಕಾರ್ಮಿಕರನ್ನು ಶಾಲಾಸಿಬ್ಬಂದಿ ಎಂದು ನೇಮಿಸಿ ನೇಮಕಾತಿ ಪತ್ರ ನೀಡಬೇಕು. ಇಎಸ್‌ಐ, ಗುಂಪು ವಿಮೆ, ಭವಿಷ್ಯನಿಧಿ ಹಾಗೂ ನಿವೃತ್ತಿವೇತನ ನೀಡಬೇಕು. ಅಗತ್ಯವಸ್ತುಗಳ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ ಬದುಕಲು ಕನಿಷ್ಠ ವೇತನ ನಿಗದಿಪಡಿಸಬೇಕು. ಪ್ರತಿ ತಿಂಗಳು ಮೊದಲ ವಾರದಲ್ಲಿ ವೇತನ ನೀಡಬೇಕು. ದಸರಾ ರಜಾ ಸಂಬಳ ಕೊಡಬೇಕು ಎಂದು ಆಗ್ರಹಿಸಿದರು.

 ಈ ಯೋಜನೆಯ ಖಾಸಗೀಕರಣದ ನೆಪದಲ್ಲಿ ಈಗಾಗಲೇ ರಾಜ್ಯದಲ್ಲಿ ಸುಮಾರು 5ರಿಂದ 6ಸಾವಿರ ಅಡುಗೆಯವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಳೆದ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅಡುಗೆಯವರು ಪ್ರಸ್ತುತ ಸಂದರ್ಭದಲ್ಲಿ ಬೀದಿ ಪಾಲಾಗಿದ್ದಾರೆ. ಸರ್ಕಾರ ಬಿಸಿಯೂಟ ಯೋಜನೆ ಖಾಸಗೀಕರಣವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಹಾಗೆಯೇ, ಗುಣಮಟ್ಟದ ಹಾಗೂ ಸರಿಯಾದ ಪ್ರಮಾಣದ ಆಹಾರ ಧಾನ್ಯಗಳಿಗಾಗಿ ನಿಗದಿತ ನಿಧಿಯನ್ನು ಮೀಸಲಿಡಬೇಕು ಹಾಗೂ ರಾಜ್ಯದ ಎಲ್ಲಾ ಶಾಲೆಗಳಿಗೂ ಬಿಸಿಯೂಟ ತಯಾರಿಸಲು ಮೂಲ ಸೌಕರ್ಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಜಿ.ಜಿ. ಅಕ್ಕಮ್ಮ, ಪದಾಧಿಕಾರಿಗಳಾದ ಎನ್. ಮಂಜುಳಾ, ಎ.ಎಸ್. ಸುಶೀಲಮ್ಮ, ಶಕುಂತಲಾ, ಕೆ.ಎಂ. ವಿಶಾಲಾಕ್ಷಮ್ಮ, ಶಿವಶಂಕರ್ ಮತ್ತಿತರರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.