ADVERTISEMENT

ಬೀದಿ ಕಸ ಗುಡಿಸಿದ ಗ್ರಾ.ಪಂ. ಅಧ್ಯಕ್ಷ, ಸದಸ್ಯರು

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 19:30 IST
Last Updated 23 ಜೂನ್ 2012, 19:30 IST
ಬೀದಿ ಕಸ ಗುಡಿಸಿದ ಗ್ರಾ.ಪಂ. ಅಧ್ಯಕ್ಷ, ಸದಸ್ಯರು
ಬೀದಿ ಕಸ ಗುಡಿಸಿದ ಗ್ರಾ.ಪಂ. ಅಧ್ಯಕ್ಷ, ಸದಸ್ಯರು   

ಶ್ರೀರಂಗಪಟ್ಟಣ: ತಾಲ್ಲೂಕಿನ ಕೆ.ಶೆಟ್ಟಹಳ್ಳಿಯಲ್ಲಿ ಶನಿವಾರ ಭಾರತ್ ನಿರ್ಮಾಣ್ ಸ್ವಯಂಸೇವಕರಿಂದ ನಡೆದ ಸ್ವಚ್ಛತಾ ಕಾರ್ಯದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಹಾಗೂ ಅಭಿವೃದ್ಧಿ ಅಧಿಕಾರಿ ಪಾಲ್ಗೊಂಡು ಬೀದಿಯ ಕಸ ಗುಡಿಸಿದರು.

ಎಲ್ಲರೂ ಕೈಯಲ್ಲಿ ಗುದ್ದಲಿ, ಸಲಕೆ ಹಿಡಿದು ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಿದರು. ಪಿಡಿಒ ಎಸ್.ಸುರೇಂದ್ರ ಕುಡಗೋಲು ಹಿಡಿದು ಪಾರ್ಥೇನಿಯಂ ಮತ್ತಿತರ ಕಳೆ ಗಿಡಗಳನ್ನು ಕತ್ತರಿಸಿದರು. ಗ್ರಾಮ ಪಂಚಾಯಿತಿ ಸಿಬ್ಬಂದಿ  ಕುಕ್ಕೆಗಳಲ್ಲಿ ಕಸ ತುಂಬಿ ಸಾಗಿಸಿದರು. ಬೀದಿ ಬದಿಯ ತಿಪ್ಪೆಗಳನ್ನು ತೆರವು ಮಾಡುವಂತೆ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಯಿತು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಸ್ವಾಮಿ, ಸದಸ್ಯ ದೇವರಾಜು ಇತರರು ಸ್ವಚ್ಛತಾ ಕಾರ್ಯಕ್ಕೆ ಕೈ ಜೋಡಿಸಿದರು.

ನಂತರ ಮಾತನಾಡಿದ ಪಿಡಿಒ ಸುರೇಂದ್ರ, ಕೆ.ಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಳಾಗಾಲ, ಶ್ರೀನಿವಾಸ ಅಗ್ರಹಾರ, ಗೌರಿಪುರ, ಗರುಡನ ಉಕ್ಕಡ ಗ್ರಾಮಗಳಲ್ಲಿ ಭಾರತ್ ನಿರ್ಮಾಣ್ ಸ್ವಯಂ ಸೇವಕರಿಂದ ಜಾಗೃತಿ ಕಾರ್ಯಕ್ರಮಗಳು ನಡೆದಿವೆ. ಬೀದಿ ನಾಟಕಗಳು, ಗೀತೆಗಳ ಮೂಲಕ ಜನರಲ್ಲಿ ಅರಿವು ಮೂಡಿಸಲಾಗಿದೆ. ಸರ್ಕಾರದಿಂದ ಸಿಗುವ ಸವಲತ್ತುಗಳು ಮತ್ತು ಅವುಗಳನ್ನು ಪಡೆಯುವ ವಿಧಾನ ಕುರಿತು ಜನರಿಗೆ ತಿಳಿ ಹೇಳಲಾಗಿದೆ. ಗ್ರಾಮ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ತಮ್ಮ ಕುಂದುಕೊರತೆ ಹೇಳಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.