ADVERTISEMENT

ಬೀದಿ ನಾಟಕ ಪ್ರಬಲ ಮಾಧ್ಯಮ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2011, 19:30 IST
Last Updated 2 ನವೆಂಬರ್ 2011, 19:30 IST
ಬೀದಿ ನಾಟಕ ಪ್ರಬಲ ಮಾಧ್ಯಮ
ಬೀದಿ ನಾಟಕ ಪ್ರಬಲ ಮಾಧ್ಯಮ   

ಧಾರವಾಡ: ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪರಿಣಾಮಕಾರಿ ಅಭಿವ್ಯಕ್ತಿ ಮಾಧ್ಯಮವಾಗಿದ್ದ ನಾಟಕ ಹಾಗೂ ಜಾನಪದ ಗೀತೆಗಳು ಇಂದಿಗೂ ಸಹ ಜಾಗೃತಿ ಮೂಡಿಸುವಲ್ಲಿ ಪ್ರಸ್ತುತವಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ದಿಲೀಪ ಹೇಳಿದರು.

ಇಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ವಾರ್ತಾ ಇಲಾಖೆ ಆಯೋಜಿಸಿರುವ ಬೆಳಗಾವಿ ವಿಭಾಗ ಮಟ್ಟದ ಆರು ದಿನಗಳ ಜಾನಪದ ಕಲಾವಿದರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಕಾರ್ಯಕ್ರಮಗಳು ಗ್ರಾಮೀಣ ಜನತೆಯ ಹೃದಯವನ್ನು ನೇರವಾಗಿ ತಲುಪುತ್ತವೆ. ಆದ್ದರಿಂದ ಜಾನಪದ ಕಲಾಪ್ರಕಾರದ ಮಾಧ್ಯಮ ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿ ಮಾಧ್ಯಮವಾಗಿದೆ ಎಂದು ಶ್ಲಾಘಿಸಿದರು.

ಪೊಲೀಸ್ ಮತ್ತು ಜನರ ನಡುವೆ ಸೌಹಾರ್ದ ಸಂಬಂಧ ಬೆಸೆಯುವ ಅಗತ್ಯವಿದೆ. ಸಂಬಂಧದ ಅನಿವಾರ್ಯತೆಯನ್ನು ಸಾಮಾನ್ಯರಿಗೆ ತಿಳಿಸುವ ಅಗತ್ಯವೂ ಇದೆ. ಈ ಸಂಗತಿಗಳು ಪ್ರದರ್ಶನ ಕಲೆಗಳಲ್ಲಿ ಪ್ರತಿಫಲನಗೊಳ್ಳಬೇಕು ಎಂದು ಸಲಹೆ ನೀಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಕಮಿಷನರ್ ಎಂ.ಎಂ.ಲೋಂಡೆ ಅಧ್ಯಕ್ಷತೆ ವಹಿಸಿ, ಸರ್ಕಾರದ ಜನಪರ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಕಲಾವಿದರ ಪಾತ್ರ ಮಹತ್ವದ್ದಾಗಿದೆ; ಕಲಾವಿದರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದರು.

ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸಿ.ಎ.ಮುತ್ತಣ್ಣ, ಮೇಲ್ವಿಚಾರಕಿ ಸುನೀತಾ ನಾಡಿಗೇರ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎನ್.ಎಂ.ಅಂಗಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಗಣೇಶ ನಾಯ್ಕ ಮಾತನಾಡಿ, ತಮ್ಮ ಇಲಾಖೆಗಳ ಯೋಜನೆಗಳನ್ನು ನಾಟಕಗಳಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.

ವಾರ್ತಾ ಇಲಾಖೆಯ ಬೆಳಗಾವಿ ವಿಭಾಗದ ಉಪನಿರ್ದೇಶಕ ಬಸವರಾಜ ಕಂಬಿ ಸ್ವಾಗತಿಸಿ, ಒಂದು ವಾರದ ಅವಧಿಯ ಈ ತರಬೇತಿ ಕಾರ್ಯಾಗಾರದಲ್ಲಿ 7 ಜಿಲ್ಲೆಗಳ 140 ಬೀದಿ ನಾಟಕ ಹಾಗೂ ಜಾನಪದ ಕಲಾವಿದರು ಭಾಗವಹಿಸಿದ್ದಾರೆ ಎಂದು ಹೇಳಿದರು.

ಶಿಬಿರದ ನಿರ್ದೇಶಕ ಎಸ್.ಎಸ್.ಹಿರೇಮಠ ಉಪಸ್ಥಿತರಿದ್ದರು. ಪಿ.ಎಸ್.ಹಿರೇಮಠ ವಂದಿಸಿದರು. ಪಿ.ಎಸ್.ಪರ್ವತಿ ಕಾರ್ಯಕ್ರಮ ನಿರೂಪಿಸಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT