ರಾಯಚೂರು: ಹೊರಟಿದ್ದು ಬೆಟ್ಟ ಅಗೆದು ಹುಲಿ ಹಿಡಿಯಲು... ಸಿಕ್ಕಿದ್ದು ಇಲಿ...! ಇದು ರಾಜ್ಯ ಅಬಕಾರಿ ಖಾತೆ ಸಚಿವ ಎಂ.ಪಿ ರೇಣುಕಾಚಾರ್ಯ ಅವರಿಗೆ ಬುಧವಾರ ನಗರದಲ್ಲಿ ಆದ ಅನುಭವ.
ಸಚಿವ ರೇಣುಕಾಚಾರ್ಯ ಇಲಾಖೆ ಪ್ರಗತಿಪರಿಶೀಲನೆ ನಡೆಸಲು ಆಗಮಿಸಿದ್ದ ಸಂದರ್ಭದಲ್ಲಿ ಇಲ್ಲಿನ ಹರಿಜನವಾಡ ಹಾಗೂ ಕೊರವರಗೇರಿಯಲ್ಲಿ ಸರಾಯಿ ಮಾರಾಟದ ಅಕ್ರಮ ಅಡ್ಡೆಗಳಿವೆ ಎಂಬ ಮಾಹಿತಿ ತಿಳಿದು ದಾಳಿ ನಡೆಸಲು ಇಲಾಖೆ ಹಿರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರೊಂದಿಗೆ 15-20 ವಾಹನದಲ್ಲಿ ತೆರಳಿದ್ದರು.
ಮೊದಲು ದಾಳಿ ಆರ್ಭಟದಲ್ಲಿ ಹರಿಜನವಾಡಕ್ಕೆ ಅಧಿಕಾರಿಗಳೊಂದಿಗೆ ಸಚಿವರು ನುಗ್ಗಿದಾಗ ಆ ಪ್ರದೇಶದಲ್ಲಿ ಅಕ್ರಮ ಸರಾಯಿ ಪತ್ತೆ ಆಗಲಿಲ್ಲ. ಆದಾಗ್ಯೂ ಕೆಲವು ಮನೆಗಳಿಗೆ ಭೇಟಿ ನೀಡಿ ಸಚಿವರು ಪರಿಶೀಲನೆ ನಡೆಸಿದರು. ನಂತರ ಕೊರವರಗೇರಿಯಲ್ಲಿ ತೆರಳಿದಾಗ 5-6 ಬಾಟಲ್ಗಳಲ್ಲಿ ತುಂಬಿದ್ದ ಸಾರಾಯಿ ಪತ್ತೆಯಾಯಿತು. ಸಚಿವರು ಅದನ್ನು ನೆಲಕ್ಕೆ ಸುರಿದು ನಾಶಪಡಿಸಿದರು.
ಅಬಕಾರಿ ಇಲಾಖೆ ಗುಲ್ಬರ್ಗ ಜಂಟಿ ಆಯುಕ್ತ ವಿಶ್ವರೂಪ, ರಾಯಚೂರು ವಿಭಾಗದ ಉಪ ಆಯುಕ್ತ ಸೋಮಶೇಖರ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.