ADVERTISEMENT

ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರದಿಂದ ‘ಕನ್ನಡ ರಾಜ್ಯೋತ್ಸವ’ ಕಲೆ-, ಸಂಸ್ಕೃತಿ ಬೆಳೆಸುವುದು ನಮ್ಮ ಕರ್ತವ್ಯ: ನ್ಯಾಯಾಧೀಶ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 8:14 IST
Last Updated 2 ಡಿಸೆಂಬರ್ 2013, 8:14 IST

ಪುತ್ತೂರು: ನಾವು ಎಷ್ಟೇ ದೊಡ್ಡವ­ರಾದರೂ ನಮ್ಮ ನಾಡು-, ನುಡಿ, -ಸಂಸ್ಕೃತಿಯ ಮಾತು ಬಂದಾಗ ಅದಕ್ಕೆ ನಾವು ಕಟಿಬದ್ಧರಾಗಬೇಕು. ಕಲೆ-, ಸಂಸ್ಕೃತಿಯನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪುತ್ತೂರು ಪ್ರಥಮ ದರ್ಜೆ ನ್ಯಾಯಾಲಯದ ನ್ಯಾಯಾಧೀಶ ಶರವಣನ್ ಹೇಳಿದರು.

ಪುತ್ತೂರಿನ ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ವತಿಯಿಂದ ಇಲ್ಲಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಶನಿ­ವಾರ ಸಂಜೆ ನಡೆದ ‘ಕನ್ನಡ ರಾಜ್ಯೋ­ತ್ಸವ, ಡಿಂಡಿಮ ಸಂಭ್ರಮ ಮತ್ತು ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾ­ಟಿಸಿ ಅವರು ಮಾತನಾಡಿದರು.

ಬೆಂಗಳೂರಿನ ಜಯನಗರದ ವಿಜಯ ಪ್ರೌಢಶಾಲೆಯ ಶಿಕ್ಷಕ ಡಾ.ಆರ್.­ಗುರು­ಪ್ರಸಾದ್ ಮಾತನಾಡಿ, ಎಲ್ಲಿಯವರೆಗೆ ಕನ್ನಡದಕಿವಿ, ಕಣ್ಣು, ಮನಸ್ಸುಗಳು ನಿರಂತ­ರ­ವಾಗಿ ಕಾರ್ಯ­ಚಟುವಟಿಕೆ­ಗಳಲ್ಲಿ ತೊಡಗಿರುತ್ತವೋ ಅಲ್ಲಿಯವರೆಗೆ ಕನ್ನಡ ಪ್ರವಹಿಸುತ್ತಲೇ ಇರುತ್ತದೆ ಎಂದರು.
ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ ಪುಟಾಣಿಗಳ ಫೋಟೊ ಸ್ಪರ್ಧೆಯಲ್ಲಿ ವಿಜೇತರಾದ ಮುದ್ದು ಕಂದಮ್ಮಗಳಿಗೆ ಧಾರವಾಹಿ ನಟ ಪ್ರದೀಪ್ ಬೆಂಗಳೂರು ಬಹುಮಾನ ವಿತರಿಸಿದರು.

ತಹಶೀಲ್ದಾರ್ ಕುಳ್ಳೇ ಗೌಡ ಎಂ.ಟಿ. ಅಧ್ಯಕ್ಷತೆ ವಹಿಸಿದ್ದರು. ಕವನ ಸ್ಪರ್ಧೆ­ಯಲ್ಲಿ ವಿಜೇತರಾದವರಿಗೆ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ.ಬಿ, ಅಂಚೆ ಕಾರ್ಡಿನಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸುದಾನ ವಿದ್ಯಾ ಸಂಸ್ಥೆಗಳ ಸಂಚಾಲಕ ರೆ.ಫಾ.ವಿಜಯ ಹಾರ್ವಿನ್, ಅಂಚೆ ಕಾರ್ಡಿನಲ್ಲಿ ಸಣ್ಣ ಕತೆ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಕೆ.ಪದ್ಮನಾಭ ಶೆಟ್ಟಿ ಅವರು ಬಹುಮಾನ ವಿತರಿಸಿದರು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕದ ಮಾಜಿ ಕಾರ್ಯದರ್ಶಿ ಮಹೇಶ್ ಕಜೆ ಅವರು ಮುಖ್ಯ ಅತಿಥಿಯಾಗಿದ್ದರು.

ಬೊಳುವಾರು ಸಾಂಸ್ಕೃತಿಕ ಕಲಾ ಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಸ್ವಾಗತಿಸಿದರು. ಪುತ್ತೂ­ರು ಇಂಡಸ್ ಕಾಲೇಜಿನ ಉಪನ್ಯಾಸಕ ಡಾ. ರಾಜೇಶ್ ಬಿಜ್ಜಂಗಳ ನಿರೂಪಿಸಿ­ದರು. ಡಿಂಡಿಮ ಸಂಚಾಲಕಿ ಕವಿತಾ ದಿನಕರ್ ಪಡೀಲು, ಗೀತಾ ಕೊಂಕೋಡಿ. ವಿದುಷಿ ಶೋಭಿತಾ ಸತೀಶ್ ರಾವ್, ಸುಶೋಭಿತಾ, ತಂಡದ ನಿದೇಶಕರಾದ ಕರುಣಾಕರ ರೈ ಬಾಲ್ಯೋಟ್ಟಗುತ್ತು, ಕೆ.ಪದ್ಮನಾಭ ಶೆಟ್ಟಿ ಬೆಟ್ಟಂಪಾಡಿ,  ಸ್ವರ ಮಾಧುರ್ಯ ಸುಗಮ ಸಂಗೀತ ಬಳಗದ  ನಿರ್ದೇಶಕ ವಕೀಲ ಜನಾರ್ದನ, ಸೀತಾರಾಮ ಶೆಟ್ಟಿ, ರಾಮಚಂದ್ರ ಬನ್ನೂರು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.