ADVERTISEMENT

ಬ್ಯಾರಿ ಸಮುದಾಯ ಆರ್ಥಿಕವಾಗಿ ಸದೃಢವಾಗಲಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ನರಸಿಂಹರಾಜಪುರ: ಬ್ಯಾರಿ ಸಮುದಾಯವು ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದು, ಈ ಜನಾಂಗದವರು ಆರ್ಥಿಕವಾಗಿ ,ಶೈಕ್ಷಣಿಕವಾಗಿ ಹಿಂದುಳಿದಿರುವುದರಿಂದ ಇವರ ಶಿಕ್ಷಣಕ್ಕೆ ಆದ್ಯತೆ ನೀಡಿ ಆರ್ಥಿಕವಾಗಿ ಸದೃಢವಾಗಿಸಲು ಜನಾಂಗದ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ತಾಲ್ಲೂಕು ಬ್ಯಾರಿ ಒಕ್ಕೂಟದ ಅಧ್ಯಕ್ಷ ಎನ್.ಎ.ಶೇಖಬ್ಬ ತಿಳಿಸಿದರು.

ಇಲ್ಲಿನ ಉಪಬಂದಿಖಾನೆಯ ವ್ಯಾಪ್ತಿಯಲ್ಲಿ ಶುಕ್ರವಾರ ಜಿಲ್ಲಾ ಬ್ಯಾರಿ ಒಕ್ಕೂಟದ ಆಶ್ರಯದಲ್ಲಿ ಜಿಲ್ಲೆಯ ಬ್ಯಾರಿ ಜನಾಂಗದ ಜನಗಣತಿ ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ವಿವಿಧ ಭಾಗಗಳಲ್ಲಿ ನೆಲೆಸಿರುವ ಬ್ಯಾರಿ ಸಮುದಾಯದವರನ್ನು ಬ್ಯಾರಿ ಭಾಷೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲು ತಾಲ್ಲೂಕಿನ ಬಾಳೆಹೊನ್ನೂರಿನಲ್ಲಿ ಬ್ಯಾರಿ ಜಾಗೃತಿ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯನ್ನು ಇದೇ 8ರಂದು ಕರೆಯಲಾಗಿದೆ.

ಬ್ಯಾರಿ ಸಾಹಿತ್ಯ ಅಕಾಡೆಮಿಯ ಆಶ್ರಯದಲ್ಲಿ ಸಾಹಿತ್ಯಕ್ಕೆ ಪೂರಕವಾದ ಕಮ್ಮಟ, ಶಿಬಿರ, ಜಾನಪದ, ಕಾವ್ಯರಚನೆ, ಕಥಾ ರಚನೆ ಶಿಬಿರಗಳನ್ನು ನಡೆಸಲಾಗುವುದು. ಸಂಶೋಧನೆ ಮತ್ತು ಜಾನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಶೃಂಗೇರಿ ಕ್ಷೇತ್ರದ ವ್ಯಾಪ್ತಿಯಲ್ಲಿ ನಡೆಯುವ ಈ ಸರಣಿಯ ಮೊದಲ ಬ್ಯಾರಿ ಸಮುದಾಯದ ಕಾರ್ಯಕ್ರಮಕ್ಕೆ ಸಮುದಾಯದ ಎಲ್ಲರೂ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಬ್ಯಾರಿ ಜನಾಂಗದ ಗಣತಿ ಕಾರ್ಯಕ್ಕೆ ಸಮುದಾಯದ ಮುಖಂಡ ಜಕ್ರಿಯಾ ಅಹಮ್ಮದ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಬ್ಯಾರಿ ಒಕ್ಕೂಟದ ಗೌರವಾಧ್ಯಕ್ಷ ಕೆ.ಎ.ಅಬೂಬಕರ್, ಒಕ್ಕೂಟದ ಉಪಾಧ್ಯಕ್ಷ ಚಾಬುಕಾಕಾ, ಕಾರ್ಯದರ್ಶಿ ಹನೀಫ್, ಉಮ್ಮರ್, ಮಹಮ್ಮದ್, ಶಾಫಿ ಮದರಸದ ಗೌರವಾಧ್ಯಕ್ಷ ಅಬೂಬಕರ್, ಸಾಧಿಕ್ ಇದ್ದರು.        

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.