ADVERTISEMENT

ಭಕ್ತಿ ಸುನಾಮಿ ಅಲೆ ಏಳಲಿ: ಶ್ರೀರವಿಶಂಕರ ಗುರೂಜಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2012, 19:30 IST
Last Updated 16 ಜನವರಿ 2012, 19:30 IST

ಬಸವಕಲ್ಯಾಣ: ಭಕ್ತಿಯ ಸುನಾಮಿ ಅಲೆ ಎಲ್ಲೆಡೆ ಏಳಬೇಕು. ಸಮಾಜದ ಪ್ರತಿಯೊಬ್ಬರೂ ನೈತಿಕ, ಅಧ್ಯಾತ್ಮಿಕ ಮೌಲ್ಯಗಳನ್ನು ಪಾಲಿಸುವಂತಾಗಬೇಕು ಎಂದು ಬೆಂಗಳೂರು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಶ್ರೀರವಿಶಂಕರ ಗುರೂಜಿ ನುಡಿದರು.

ಇಲ್ಲಿನ ರಥ ಮೈದಾನದಲ್ಲಿ ಸೋಮವಾರ `ಮಹಾಸತ್ಸಂಗ~ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂತ- ಮಹಾತ್ಮರು, ಶರಣರು ನಮಗೆ ಸಾಕಷ್ಟು ಜ್ಞಾನ ಕೊಟ್ಟಿದ್ದಾರೆ. ಹೊಸದೇನನ್ನೂ ಕೊಡಬೇಕಾಗಿಲ್ಲ. ಅವರು ಹೇಳಿರುವುದು ಮರೆತು ಹೋಗಿದ್ದು, ಜ್ಞಾಪಿಸುವ ಕೆಲಸ ನಾವು ಮಾಡುತ್ತಿದ್ದೇವೆ ಎಂದರು.

12ನೇ ಶತಮಾನದಲ್ಲಿ ಕಲ್ಯಾಣದಲ್ಲಿ ಬಸವಣ್ಣನವರು, ಮಹಾರಾಷ್ಟ್ರದಲ್ಲಿ ಸಂತ ಜ್ಞಾನೇಶ್ವರ, ತುಕಾರಾಮರು ಭಕ್ತಿಯ ಅಲೆ ಎಬ್ಬಿಸಿದ್ದರು. ಅಂದು ಭಾರತ ಪುಣ್ಯಭೂಮಿ ಎನಿಸಿತ್ತು. ಆ ದಿನಗಳು ಪುನರಾವರ್ತನೆ ಆಗಬೇಕಾಗಿದೆ. ಎಂದರು.

ಬೇಡಿಕೆಗಳ ಭಾರ ಹೆಚ್ಚಾಗಬಾರದು. ಎಂಥ ಕಷ್ಟ ಬಂದರೂ ಸಹಿಸುವ ಶಕ್ತಿ, ಸಹನೆ ಎಲ್ಲರಲ್ಲಿ ಬೆಳೆಯಬೇಕು. ಎಲ್ಲರ ಮನಸ್ಸು ಸ್ವಚ್ಛವಾಗಬೇಕು. ಆಗ ಮಾತ್ರ ಆಶೀರ್ವಾದ ಕೊಡುವ ತಾಕತ್ತು ಬರುತ್ತದೆ ಎಂದರು.

ಮುಚಳಂಬ ಪ್ರಣವಾನಂದ ಸ್ವಾಮೀಜಿ, ತಡೋಳಾ ರಾಜೇಶ್ವರ ಶಿವಾಚಾರ್ಯರು, ಹುಲಸೂರ ಶಿವಾನಂದ ಸ್ವಾಮೀಜಿ, ಹಾರಕೂಡ ಚೆನ್ನವೀರ ಶಿವಾಚಾರ್ಯರು, ತಾಂಬೋಳಾ ವಿಜಯಕುಮಾರ ದೇವರು, ತ್ರಿಪುರಾಂತ ಅಭಿನವ ರುದ್ರಮುನಿ ಶಿವಾಚಾರ್ಯರು, ಸ್ವಾಗತ ಸಮಿತಿ ಅಧ್ಯಕ್ಷ ಸುನಿಲ ಪಾಟೀಲ, ಪ್ರಮುಖರಾದ ಸಂಜೀವ ಕಾಳೇಕರ್, ಡಾ.ವಿ.ಬಿ.ಮಂಡಿ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.