ADVERTISEMENT

ಭದ್ರೆಗೆ ಮುಖ್ಯಮಂತ್ರಿ ಬಾಗಿನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 19:30 IST
Last Updated 13 ಸೆಪ್ಟೆಂಬರ್ 2011, 19:30 IST

ಚಿಕ್ಕಮಗಳೂರು: ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಭದ್ರಾ ಜಲಾಶಯಕ್ಕೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ದಂಪತಿ ಮಂಗಳವಾರ ಬಾಗಿನ ಅರ್ಪಿಸಿದರು.

ಬೆಂಗಳೂರಿನಿಂದ ಬೆಳಿಗ್ಗೆ 9.30ಕ್ಕೆ ಹೆಲಿಕಾಪ್ಟರ್‌ನಲ್ಲಿ ಲಕ್ಕವಳ್ಳಿಗೆ ಆಗಮಿಸಿದ ಮುಖ್ಯಮಂತ್ರಿ, ಪತ್ನಿ ಡಾಟಿ ಎಸ್.ಗೌಡ ಜತೆಗೆ ಜಲಾಶಯ ದಂಡೆಯಲ್ಲಿರುವ ಈಶ್ವರ ದೇವರಿಗೆ, ನಂತರ ಭದ್ರಾ ಜಲಾಶಯಕ್ಕೂ ಪೂಜೆ ಸಲ್ಲಿಸಿದರು.

ಭದ್ರಾ ಜಲಾಶಯ ಸತತ ಏಳು ವರ್ಷಗಳಿಂದ ಭರ್ತಿಯಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ ಮುಖ್ಯಮಂತ್ರಿ, ಕಳೆದ ಬಾರಿ ಸಂಸದನಾಗಿ  `ಭದ್ರೆ~ ತಾಯಿಗೆ ಬಾಗಿನ ಅರ್ಪಿಸಿದ್ದೆ. ಈ ಬಾರಿ ಮುಖ್ಯಮಂತ್ರಿಯಾಗಿ ಬಾಗಿನ ಅರ್ಪಿಸುವಂತೆ ಆಶೀರ್ವದಿಸಿದ್ದಾಳೆ ಎಂದರು.

ಕಡೂರು ತಾಲ್ಲೂಕು ಹೊರತುಪಡಿಸಿ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿದೆ. ನಾಡಿನ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಲಿಂಗನಮಕ್ಕಿ ಜಲಾಶಯವೂ ಗರಿಷ್ಠ ಮಟ್ಟ ತಲುಪಲು 3 ಅಡಿ ಬಾಕಿ ಇದ್ದು, ಇನ್ನೊಂದು ವಾರದಲ್ಲಿ ಭರ್ತಿಯಾಗಲಿದೆ. ಇದು ಬಹಳ ವರ್ಷಗಳ ನಂತರ ಭರ್ತಿ ಭಾಗ್ಯ ಕಾಣಲಿದ್ದು, ನಾಡಿನ ಸುಭಿಕ್ಷತೆ ಮತ್ತು ವಿದ್ಯುತ್ ಉತ್ಪಾದನೆಗೆ ಶುಭ ಸೂಚಕ ಎಂದು ಹರ್ಷ ವ್ಯಕ್ತಪಡಿಸಿದರು.

ತರೀಕೆರೆ ಶಾಸಕ ಸುರೇಶ್ ದಂಪತಿಯೂ ಭದ್ರೆಗೆ ಬಾಗಿನ ಅರ್ಪಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್, ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ, ಶಿವಮೊಗ್ಗ ಗ್ರಾಮಾಂತರ ಶಾಸಕ ಕುಮಾರಸ್ವಾಮಿ, ವಿಧಾನಪರಿಷತ್ ಸದಸ್ಯ ಸಿದ್ದರಾಮಣ್ಣ, ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶೇಖರಪ್ಪ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪದ್ಮನಾಭ ಭಟ್, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯರಾದ ಶುಭಾ ಕೃಷ್ಣಮೂರ್ತಿ ಮತ್ತು ಪ್ರಫುಲ್ಲಾ ಬಿ.ಮಂಜುನಾಥ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.