ADVERTISEMENT

ಭಾರತವೆಂದರೆ ಪಾಶ್ಚಾತ್ಯರಿಗೂ ಗೌರವ

​ಪ್ರಜಾವಾಣಿ ವಾರ್ತೆ
Published 3 ಜೂನ್ 2012, 19:30 IST
Last Updated 3 ಜೂನ್ 2012, 19:30 IST
ಭಾರತವೆಂದರೆ ಪಾಶ್ಚಾತ್ಯರಿಗೂ ಗೌರವ
ಭಾರತವೆಂದರೆ ಪಾಶ್ಚಾತ್ಯರಿಗೂ ಗೌರವ   

ಧಾರವಾಡ: “ಭಾರತೀಯರ ಬದುಕನ್ನು ಕಣ್ಣಾರೆ ಕಂಡ ಹಲವಾರು ಪಾಶ್ಚಿಮಾತ್ಯ ವಿದ್ವಾಂಸರಿಗೆ ನಮ್ಮ ದೇಶದ ಬಗ್ಗೆ ಅಪಾರ ಗೌರವವಿತ್ತು” ಎಂದು ವಿಜಾಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಭಾನುವಾರ ಇಲ್ಲಿ ಹೇಳಿದರು.

ಹಿರಿಯ ವಕೀಲ ಎಂ.ಸಿ. ಬಂಡಿ ಅವರಿಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ `ಎಂ.ಸಿ.ಬಂಡಿ ಅಭಿನಂದನಾ ಸಮಿತಿ~ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.“ಬದುಕಿದರೆ ಭಾರತೀಯರಂತೆ ಬದುಕಬೇಕು ಎಂದು ಲಾರ್ಡ್ ವಿಟ್ಮನ್, ಎಮರ್ಸನ್‌ರಂತಹ ವಿದ್ವಾಂಸರು ತಮ್ಮ ಲೇಖನಗಳಲ್ಲಿ ದಾಖಲಿಸಿದ್ದಾರೆ. ಭಾರತೀಯರು ಬೆಳಕಿನಲ್ಲಿ ಬದುಕುತ್ತಾರೆ.

ಬೆಳಕು ಎಂದರೆ ಸತ್ಯ, ಪ್ರೇಮ. ಕತ್ತಲೆ ಎಂದರೆ ದ್ವೇಷ ಭಾವನೆ. ಬೆಳಕಿನಲ್ಲಿಯೇ ಬದುಕಿದ್ದಾರೆ ಎಂದರೆ ಸತ್ಯದ, ಪ್ರೇಮದ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುತ್ತಿದ್ದಾರೆ ಎಂಬರ್ಥದಲ್ಲಿ ಹೇಳಿದ್ದಾರೆ” ಎಂದು ಸ್ವಾಮೀಜಿ ವಿವರಿಸಿದರು.

“ಅಧಿಕಾರ, ಅಂತಸ್ತು, ಪ್ರಚಾರದಿಂದ ಯಾರೂ ದೊಡ್ಡವರಾಗುವುದಿಲ್ಲ. ಬದಲಾಗಿ ಅವರು ಮಾಡುವ ಕಲ್ಯಾಣ ಕಾರ್ಯಗಳಿಂದ ಎತ್ತರದ ಸ್ಥಾನಕ್ಕೆ ಏರುತ್ತಾರೆ. ಬಂಡಿ ಅವರು ತಮ್ಮ ಕರ್ಮದಿಂದ ದೊಡ್ಡವರಾಗಿದ್ದಾರೆ” ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಶ್ಲಾಘಿಸಿದರು.

“ಯುವ ವಕೀಲರು ತಮ್ಮ ಕಕ್ಷಿದಾರರ ಪರ ವಾದ ಮಂಡಿಸಲು ಬರುವ ಮುನ್ನ ಅಗತ್ಯ ಸಿದ್ಧತೆ ಮಾಡಿಕೊಳ್ಳದೇ ಬರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಎಂ.ಸಿ. ಬಂಡಿ ಅವರು ಪೂರಕ ಸಿದ್ಧತೆ ಮಾಡಿಕೊಂಡೇ ನ್ಯಾಯಾಲಯಕ್ಕೆ ಹೋಗುತ್ತಿದ್ದರು” ಎಂದು ಹೈಕೋರ್ಟ್ ನ್ಯಾಯಮೂರ್ತಿ ಮೋಹನ ಶಾಂತನಗೌಡರ ಪ್ರಶಂಸಿಸಿದರು.

75 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಂಡಿ ಅವರ ವ್ಯಕ್ತಿತ್ವ ಪರಿಚಯಿಸುವ `ನ್ಯಾಯನಿಷ್ಠುರಿ~ ಅಭಿನಂದನಾ ಗ್ರಂಥವನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.