ADVERTISEMENT

ಭೂಮಿ ಕೊಟ್ಟು ಗುಲಾಮರಾಗಬೇಡಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 19:30 IST
Last Updated 11 ಸೆಪ್ಟೆಂಬರ್ 2011, 19:30 IST

ಧಾರವಾಡ:`ಊಳುವವನೇ ಭೂಮಿಯ ಒಡೆಯ~ ಎಂಬ ಕಾಯ್ದೆ ಜಾರಿಯಿಂದಾಗಿ ರಾಜ್ಯದಲ್ಲಿ ಪ್ರತಿಯೊಬ್ಬ ರೈತರಿಗೂ ಭೂಮಿಯ ಒಡೆಯರಾಗುವ ಅವಕಾಶ ದೊರೆತಿದ್ದು, ವಿದೇಶಿ ಕಂಪೆನಿಗಳಿಗೆ ಭೂಮಿ ಮಾರಾಟ ಮಾಡಿ ಅವರ ಗುಲಾಮರಾಗಬೇಡಿ ಎಂದು ಕಾಗಿನೆಲೆ ಮಹಾ ಸಂಸ್ಥಾನ ಕನಕಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದ ಮೂರನೇ ದಿನವಾದ ಭಾನುವಾರ ನಡೆದ `ರೈತರಿಗಾಗಿ ರೈತರು~ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ರೈತರು ಹೊಲ-ಮನೆಗೆ ಹೋಗದಂತಹ ದುರಂತ ಪರಿಸ್ಥಿತಿ ನಿರ್ಮಾಣವಾಗಿದೆ. ರೈತ ಸೋಂಬೇರಿಯಾದರೆ ದೇಶಕ್ಕೆ ಅನ್ನ ಸಿಗದಂತಾಗುತ್ತದೆ ಎಂದು ಎಚ್ಚರಿಸಿದ ಅವರು, ಹೊಲ ಮಾರಿದರೆ ಹೆತ್ತ ತಾಯಿಯನ್ನು ಮಾರಾಟ ಮಾಡಿದಂತಾಗುತ್ತದೆ. ಭೂಮಿ ಮಾರಾಟ ಮಾಡುವ ಯೋಚನೆಗಳನ್ನು ಕೈಬಿಟ್ಟು ಕೃಷಿ ಕಾಯಕ ಮುಂದುವರಿಸುವಂತೆ ಸೂಚಿಸಿದರು.
ಧಾರವಾಡ ಕೃಷಿ ವಿ.ವಿ ವಿಶ್ರಾಂತ ಕುಲಪತಿ ಡಾ. ಎಂ.ಮಹಾದೇವಪ್ಪ, ಸಾವಯವ ಕೃಷಿ ವಿಧಾನ ಅಳವಡಿಸಿಕೊಂಡು ಸಾಧನೆ ಮಾಡಿದ ರೈತರಾದ ಹಾನಗಲ್‌ನ ರಾಜೇಶ್ವರಿ ಹಿರೇಮಠ, ಶಿರಸಿ ವಿಶ್ವೇಶ್ವರ ಹೆಗಡೆ, ವಿಜಾಪುರದ ಆನಂದ ಗುರುಲಿಂಗಪ್ಪ, ಮಂಗಳಖೇಡ, ಬಲದೇವ ರಾಮಚಂದ್ರ ಹಲಗೂರು, ಕೃಷ್ಣಗೌಡ ಗೋವಿಂದಗೌಡ ಪಾಟೀಲರನ್ನು ನಿರಂಜನಾನಂದ ಪುರಿ ಸ್ವಾಮೀಜಿ ಸನ್ಮಾನಿಸಿದರು. ಕುಲಪತಿ ಡಾ.ಆರ್. ಆರ್.ಹಂಚಿನಾಳ, ಡಾ. ಆರ್.ಎಸ್. ಗಿರಡ್ಡಿ, ಡಾ.ಎಸ್.ಜೆ. ನಾಯಕ, ಡಾ. ಎಚ್.ಬಿ.ಬಬಲಾದ, ಡಾ. ಶ್ರೀಪಾದ ಕುಲಕರ್ಣಿ, ಡಾ.ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.