ADVERTISEMENT

ಮನುವಾದಿಗಳಿಂದ ಹಿಂದುಳಿದವರಿಗೆ ಅನ್ಯಾಯ

​ಪ್ರಜಾವಾಣಿ ವಾರ್ತೆ
Published 27 ಮೇ 2012, 19:30 IST
Last Updated 27 ಮೇ 2012, 19:30 IST

ಚಿಂಚೋಳಿ: ಮಾಂಸಾಹಾರಿಗಳಾಗಿದ್ದ ಮೇಲ್ವರ್ಗದವರು ಪ್ರಾಣಿ ಹಿಂಸೆ ಮಾಡುತ್ತಿದ್ದುದರಿಂದ ದೇಶದಲ್ಲಿ ಗೋವುಗಳ ಸಂಖ್ಯೆ ಕ್ಷೀಣಿಸುತ್ತಿತ್ತು. ಇದರಿಂದ ಗೋವುಗಳ ರಕ್ಷಣೆಗೆ ಮುಂದಾದ ಗೌತಮಬುದ್ಧ ಪ್ರಾಣಿ ಹಿಂಸೆ ನಿಷೇಧಿಸಿದರು ಎಂದು ಉಪನ್ಯಾಸಕ ಸುಭಾಷ್ ಶೀಲವಂತ ತಿಳಿಸಿದರು.

ತಾಲ್ಲೂಕಿನ ಸುಲೇಪೇಟದಲ್ಲಿ ಲಿಂಗಾಯತ ಹಿಂದುಳಿದ ಅಲ್ಪಸಂಖ್ಯಾತ ಮತ್ತು ದಲಿತ ಜನ ಜಾಗೃತಿ ವೇದಿಕೆಯು  ಮಹಾಪುರುಷರು ಮತ್ತು ಅವರ ಚಳವಳಿ ಕುರಿತು ಭಾನುವಾರ ಏರ್ಪಡಿಸಿದ್ದ ಒಂದು ದಿನದ ಅಧ್ಯಯನ ಶಿಬಿರದಲ್ಲಿ ಅವರುಮಾತನಾಡಿದರು.

ವರ್ಣಾಶ್ರಮ ವ್ಯವಸ್ಥೆಯಲ್ಲಿ ಲಿಂಗಾಯತರು ಶೂದ್ರರಾಗಿದ್ದರು. ಇದನ್ನು ಗಮನಿಸಿದ ಬಸವಣ್ಣ ಹಿಂದೂ ಧರ್ಮದ ಮನುವಾದಿ ವ್ಯವಸ್ಥೆ ಧಿಕ್ಕರಿಸಿ ಸ್ವತಂತ್ರ ಲಿಂಗಾಯತ ಧರ್ಮ ಸ್ಥಾಪಿಸಿದರು ಎಂದರು.

ಬುದ್ಧ ಬಸವ ಹಾಗೂ ಅಂಬೇಡ್ಕರ್ ಆಶಯಕ್ಕೆ ತಕ್ಕಂತೆ ಮಹಾತ್ಮ ಜ್ಯೋತಿಭಾ ಫುಲೆ ಚಳವಳಿ ಆರಂಭಿಸಿದಾಗ ಅದರ ದಿಕ್ಕು ಬದಲಿಸಲು ಬಾಲಗಂಗಾಧರ ತಿಲಕ್ ಅವರು ಗಣೇಶ ಹಾಗೂ ಶಿವಾಜಿ ಉತ್ಸವ ಆರಂಭಿಸಿದರು ಎಂದು ಅಭಿಪ್ರಾಯಪಟ್ಟರು.

ಕಾಳಗಿಯ ಮಾರುತಿ ಭುತಾಳಿ ಮಾತನಾಡಿ, ಮನುವಾದಿಗಳು ಈ ದೇಶದ ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗದವರಿಗೆ ಸಾಕಷ್ಟು ಅನ್ಯಾಯವೆಸಗಿದ್ದಾರೆ. ಈ ಸತ್ಯ ಅರಿತು ದೇಶದ ಮೂಲ ನಿವಾಸಿಗಳು ಒಂದಾಗಬೇಕು ಎಂದರು.

ವರ್ತಕರ ಸಂಘದ ಅಧ್ಯಕ್ಷ ಮಹಾರುದ್ರಪ್ಪ ದೇಸಾಯಿ ಉದ್ಘಾಟಿಸಿದರು. ಹುಲಸೂರಿನ ಶಿವಾನಂದ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ವಕೀಲ ಮಾಣಿಕರಾವ್ ಗುಲಗುಂಜಿ ಅಧ್ಯಕ್ಷತೆ ವಹಿಸಿದ್ದರು.
 
ಗುರುಲಿಂಗಪ್ಪ ಹಾಲಳ್ಳಿ, ಗೌತಮ ಬೊಮ್ಮನಳ್ಳಿ, ಬಸವರಾಜ ಮೇತ್ರಿ, ಅಣ್ಣಾರಾವ್ ಪೆದ್ದಿ, ಸೋನ ಕಾಂಬಳೆ, ಮಲ್ಲಿಕಾರ್ಜುನ ಮಾಳಗೆ ಮಾತನಾಡಿದರು. ಮೇಘರಾಜ ರಾಠೋಡ್, ಶಿವಶರಣಪ್ಪ ಕಮಲಾಪೂರ, ಗುಂಡಪ್ಪ ಕರೆಮನೋರ್, ಮಹೇಶ ಬೇಮಳಗಿ, ಸಂಜಯ ಮಾಕಲ್ ಮುಂತಾದವರು ಇದ್ದರು. ಮಾರುತಿ ಗಂಜಗಿರಿ ನಿರೂಪಿಸಿದರು.
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.