ADVERTISEMENT

ಮಹಾಂತ ಶ್ರೀಗಳು ಅಪ್ಪಟ ಬಸವ ನಿಷ್ಠರು

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ಲಿಂಗಸುಗೂರ: 12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಆಚಾರಗಳನ್ನು ನಡೆ ನುಡಿಯಲ್ಲಿ ಒಂದಾಗಿಸಿಕೊಂಡು ಕಲಿಯುಗದ ಬಸವಣ್ಣ ಎಂದು ಗುರ್ತಿಸಿಕೊಂಡವರು ಇಳಕಲ್ಲಿನ ಲಿಂಗೈಕ್ಯ ವಿಜಯ ಮಹಾಂತ ಶಿವಯೋಗಿಗಳು. ಅಂತಹ ಅಪ್ಪಟ ಬಸವ ನಿಷ್ಠರ ಶತಮಾನೋತ್ಸವ ಆಚರಣೆ ಮಾಡುತ್ತಿರುವುದು ಭಕ್ತ ಸಮೂಹದಲ್ಲಿ ಉತ್ಸಾಹ ತುಂಬಿ ತುಳುಕುವಂತೆ ಮಾಡಿದೆ ಎಂದು ಶಿರೂರಿನ ಡಾ. ಬಸವಲಿಂಗ ಸ್ವಾಮಿಗಳು ಶನಿವಾರ ಇಲ್ಲಿ ಹೇಳಿದರು.

ಪಟ್ಟಣದ ಚಿತ್ತರಗಿ-ಇಳಕಲ್ಲಿನ ಶಾಖಾ ಅನುಭವ ಮಂಟಪದಲ್ಲಿ ಶ್ರೀಗಳ ಶತಮಾನೋತ್ಸವ ಹಾಗೂ ಶರಣ ಸಂಸ್ಕೃತಿ ಮಹೋತ್ಸವದ ಷಟ್‌ಸ್ಥಲ ಧ್ವಜಾರೋಹಣ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

ುಠ ಮಾನ್ಯಗಳಿಗೆ ವಟುಗಳನ್ನು ಸಿದ್ಧಗೊಳಿಸುವ ಶಿವಯೋಗ ಮಂದಿರದ ಸ್ಥಾಪನೆಯಲ್ಲಿ ಇಳಕಲ್ಲಿನ ಅಪ್ಪಗಳು ಮಹತ್ವದ ಪಾತ್ರ ವಹಿಸಿದ್ದರು. ಮದುವೆಯಲ್ಲಿ ಅಕ್ಕಿಕಾಳು ಹಾಕುವ, ಅರಿಷಿಣ, ಕುಂಕುಮ, ಬಳೆ ಇತರೆ ಮೌಢ್ಯತೆಯ ಸಂಕೇತಗಳನ್ನು ನಿಷೇಧಿಸುವ ಮೂಲಕ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದರು ಎಂದು ಬಣ್ಣಿಸಿದರು.

ಡಾ. ಶಿವಬಸಪ್ಪ ಹೆಸರೂರ ಅವರು ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಿದರು. ಇಳಕಲ್ಲಿನ ಡಾ. ವಿಜಯಮಹಾಂತ ಶಿವಯೋಗಿಗಳು, ಕಿರಿಯ ಶ್ರೀಗಳಾದ ಗುರುಮಹಾಂತ ಸ್ವಾಮಿಗಳು, ಮರೆಗುದ್ದಿಯ ಗುರುಮಹಾಂತ ಸ್ವಾಮಿಗಳು, ಹೊನ್ನೂರಿನ ಪ್ರವಚನಕಾರ ಈಶ್ವರ ಮಂಟೂರು ಅನುಭಾವ ಹಂಚಿಕೊಂಡರು.

ಪುರಸಭೆ ಮುಖ್ಯಾಧಿಕಾರಿ ಈರಣ್ಣ ಬಿರಾದರ, ಮುಸ್ಲಿಕಾರಲಕುಂಟಿಯ ಈಶ್ವರಯ್ಯ ಶಾಸ್ತ್ರಿ, ಮಸ್ಕಿಯ ಲಕ್ಷ್ಮಣ ಷಣ್ಮುಖಪ್ಪ, ಎಚ್.ಬಿ. ಮುರಾರಿ, ಭೂಪನಗೌಡ ಕರಡಕಲ್ಲ ಮತ್ತಿತರರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.