ADVERTISEMENT

ಮಹಿಳೆಗೆ ತಂತ್ರಜ್ಞಾನದ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಶಿವಮೊಗ್ಗ: ಒಂದು ಕುಟುಂಬ ಹಾಗೂ ಸಮಾಜವನ್ನು ಅಭಿವೃದ್ಧಿಪಡಿಸುವ ಗುರುತರ ಜವಾಬ್ದಾರಿ ಮಹಿಳೆ ಮೇಲಿರುವುದರಿಂದ ಆಕೆಗೆ ತಂತ್ರಜ್ಞಾನ, ವಿಜ್ಞಾನ ಕುರಿತು ಸಾಮಾನ್ಯಜ್ಞಾನ ಅಗತ್ಯ ಎಂದು ಮನೋವೈದ್ಯ ಡಾ.ಕೆ.ಆರ್. ಶ್ರೀಧರ್ ತಿಳಿಸಿದರು.

ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಬುಧವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ `ಮಹಿಳೆ ಮತ್ತು ವಿಜ್ಞಾನ~ ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇಂದಿನ ತಂತ್ರಜ್ಞಾನ ಯುಗದಲ್ಲಿ ತಾಯಂದಿರಿಗೆ ವಿಜ್ಞಾನದ ಉಪಯೋಗ ಕುರಿತು ಅರಿವು ಮೂಡಿಸಬೇಕಾಗಿದೆ. ಅದಕ್ಕಾಗಿ ಇಂತಹ ಕಾರ್ಯಾಗಾರಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಸದಸ್ಯ ಎನ್.ಜೆ. ರಾಜಶೇಖರ್ ಮಾತನಾಡಿ, ಸಂಶೋಧನೆಯಲ್ಲಿ ಮಹಿಳೆ ಅತ್ಯಂತ ಹಿಂದುಳಿದಿದ್ದು, ಮಹಿಳಾ ಸಬಲೀಕರಣದ ಮೂಲಕ ಶಿಕ್ಷಣ, ವಿಜ್ಞಾನಗಳಲ್ಲಿ ಪ್ರಗತಿ ಸಾಧಿಸಬೇಕಿದೆ ಎಂದರು.

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ರೀಟಾ ಮಾಡ್ತಾ ಮಾತನಾಡಿ, ಒಂದು ಕುಟುಂಬದಲ್ಲಿ ಮಹಿಳೆ ಆದರ್ಶ ತಾಯಿಯಾಗಿ, ಹೆಂಡತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಬಡತನ, ದೈಹಿಕ ತೊಂದರೆಗಳಿಂದ ಮಾನಸಿಕವಾಗಿ ದುರ್ಬಲವಾಗಿದ್ದಾರೆ. ಈ ನಿಟ್ಟಿನಲ್ಲಿ ಮಹಿಳೆಯರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಅರಿವು ಮೂಡಿಸುವ ಕೆಲಸ ಆಗಬೇಕು ಎಂದರು.

ಉಪನ್ಯಾಸಕ  ಡಾ.ಪರಿಸರ ನಾಗರಾಜ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಚಾಲಕ ಡಾ.ಶೇಖರ್ ಗೌಳೇರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಅಂಗನವಾಡಿ ಸಂಘ, ಸ್ತ್ರೀಶಕ್ತಿ ಸಂಘಗಳ ಕಾರ್ಯಕರ್ತೆಯರು ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.