ಮೈಸೂರು: ‘ಭಾರತದಲ್ಲಿ ಅಮಾನುಷವಾಗಿ ಬೆಳೆದಿರುವ ಅಸ್ಪೃಶ್ಯತೆಯನ್ನು ಮಾನವೀಯ ಚಿಂತನೆ ಮತ್ತು ನಡವಳಿಕೆಯಿಂದ ಮಾತ್ರ ನಿರ್ಮೂಲನೆ ಮಾಡಲು ಸಾಧ್ಯ’ ಎಂದು ಶಾಸಕ ವಿ.ಶ್ರೀನಿವಾಸ ಪ್ರಸಾದ್ ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ನಗರ ಘಟಕ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ.ವಿ.ಮುನಿವೆಂಕ ಟಪ್ಪ ಸಂಪಾದಿಸಿರುವ ‘ದಲಿತ ಚಳವಳಿ ಚರಿತ್ರೆ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
‘ಕಮ್ಯೂನಿಸ್ಟ್ ಪ್ರೇರಣೆಯಿಂದ ಕೇರಳದಂತಹ ರಾಜ್ಯದಲ್ಲಿ ವರ್ಗ ಸಂಘರ್ಷ ನಡೆದಿದೆ. ಆದರೆ ಅದೇ ನಾಡಿನಲ್ಲಿ ಜಾತಿಯ ಹೆಸರಲ್ಲಿ ಪ್ರತಿಮೆ ಗಳನ್ನು, ಕುರ್ಚಿಗಳನ್ನು ಗಂಜಲದಿಂದ ತೊಳೆಯುವ ಅವಿವೇಕ, ಅಮಾನುಷ ಘಟನೆಗಳು ನಡೆಯುತ್ತಿರುವುದು ದೊಡ್ಡ ದುರಂತ’ ಎಂದು ವಿಷಾದ ವ್ಯಕ್ತಪಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿ.ವಿ. ಅಂತಾರಾಷ್ಟ್ರೀಯ ಕೆಂದ್ರದ ನಿರ್ದೇಶಕಿ ಪ್ರೊ.ಆರ್.ಇಂದಿರಾ ಮಾತನಾಡಿ ‘ಚಳವಳಿಗಳ ಉದ್ದೇಶ ಸಾಮಾಜಿಕ ನ್ಯಾಯವೇ ಆಗಿರುವುದರಿಂದ ಅಂತರ್ ಸಂಬಂಧ ಅಗತ್ಯ’ ಎಂದರು.
‘ದಲಿತ ಚಳವಳಿ ಚರಿತ್ರೆ’ ಕೃತಿ ಕುರಿತು ಪತ್ರಕರ್ತ ರವೀಂದ್ರ ಭಟ್ ಐನಕೈ ಮಾತನಾಡಿದರು. ಸಂಪಾದಕ ಡಾ.ವಿ.ಮುನಿವೆಂಕಟಪ್ಪ ಅನುಭವವನ್ನು ಹಂಚಿಕೊಂಡರು. ಪ್ರಕಾಶಕ ಮಾನಸ ಇದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಎಂ.ಚಂದ್ರಶೇಖರ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ವಿ.ವಿದ್ಯಾಸಾಗರ ಕದಂಬ ನಿರೂಪಿಸಿ, ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.