ADVERTISEMENT

ಮಾನವೀಯತೆ ರೂಢಿಸಿಕೊಳ್ಳಲು ಸಲಹೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಸೋಮವಾರಪೇಟೆ: ಅನ್ಯ ಧರ್ಮವನ್ನು ದ್ವೇಷಿಸದೆ ಸನ್ಮಾರ್ಗದತ್ತ ನಡೆಯಲು ತಮ್ಮ ಧರ್ಮದ ತಳಹದಿಯ ಮೇಲೆ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಸಕಲೇಶಪುರದ ಕೆ.ಎಂ.ಇಬ್ರಾಹಿಂ ಮುಸ್ಲಿಯಾರ್ ಹೇಳಿದರು.

ಆಲೆಕಟ್ಟೆ ರಸ್ತೆಯಲ್ಲಿರುವ ಮಲಂಗ್ ಷಾವಲಿ ಯೂತ್ ಕಮಿಟಿಯು ಪಟ್ಟಣದ ಕೊಡವ ಸಮಾಜದಲ್ಲಿ ಭಾನುವಾರ ಆಯೋಜಿಸಿದ್ದ ಮುಸ್ಲಿಂ ಬಡ ಹೆಣ್ಣು ಮಕ್ಕಳ ಉಚಿತ ಸಾಮೂಹಿಕ ವಿವಾಹ ಹಾಗೂ ಭಾವೈಕ್ಯತಾ ಸಮಾವೇಶದಲ್ಲಿ ಮಾತನಾಡಿದ ಅವರು ಸಮಾಜದಲ್ಲಿರುವ ಅಸ್ಪೃಶ್ಯತೆಯನ್ನು ದೂರಮಾಡಿ ಸರ್ವರೂ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.


ಪ್ರಸ್ತುತ ಸಮಾಜದಲ್ಲಿ ಮನುಷ್ಯ ಹಾಗೂ ಜೀವಕ್ಕೆ ಬೆಲೆ ಇಲ್ಲದಂತಾಗಿರುವುದು ವಿಪರ್ಯಾಸ. ಇದಕ್ಕೆ ಕಾರಣ ಸ್ನೇಹ ಶೂನ್ಯತೆ. ಸೌಹಾರ್ದಯುತ ಬದುಕಿಗೆ ಧರ್ಮ ಅತಿ ಮುಖ್ಯ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಮೂಲಕ ಧರ್ಮದ ನೆಲೆಗಟ್ಟಿನಲ್ಲಿ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕಮಿಟಿಯ ಗೌರವಾಧ್ಯಕ್ಷ ಕೆ.ಎ.ಯಾಕೂಬ್ ಪ್ರಾಸ್ತಾವಿಕವಾಗಿ ಮಾತನಾಡಿ ಸಮಿತಿಯ ಆಶ್ರಯದಲ್ಲಿ ಕಳೆದ ವರ್ಷ ಎರಡು ಜೋಡಿ ಉಚಿತ ವಿವಾಹ ನೆರವೇರಿಸಿದ್ದು, ಈ ವರ್ಷ ರೂ.8 ಲಕ್ಷ ವೆಚ್ಚದಲ್ಲಿ 5 ಜೋಡಿಗೆ ವಿವಾಹ ಮಾಡಲಾಗಿದೆ ಎಂದರು.

ಸಮಿತಿ ವತಿಯಿಂದ ಬಡ ಕುಟುಂಬದ ವಧುವಿಗೆ ತಲಾ 40 ಗ್ರಾಂ ಆಭರಣ ಹಾಗೂ ವಸ್ತ್ರ ಸೇರಿದಂತೆ ಇತರ ಖರ್ಚುಗಳನ್ನು ಭರಿಸಿ ವಿವಾಹ ಕಾರ್ಯಕ್ರಮ ನೆರವೇರಿಸಲಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT