ಮಂಗಳೂರು: ಪಡೀಲ್ನ `ಮಾರ್ನಿಂಗ್ ಮಿಸ್ಟ್~ ಹೋಂ ಸ್ಟೇಯಲ್ಲಿ ಬರ್ತ್ ಡೇ ಪಾರ್ಟಿಯ ವಿದ್ಯಾರ್ಥಿಗಳ ಮೇಲೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿ ವಾರ ಕಳೆದಿದ್ದು, ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಗಳಿಗೆ ಪೊಲೀಸರು ನೋಟಿಸ್ ನೀಡಲಾರಂಭಿಸಿದ್ದಾರೆ.
ಪಾರ್ಟಿಗಳನ್ನು ಏರ್ಪಾಡು ಮಾಡುವುದಕ್ಕೆ ಸಂಪೂರ್ಣ ನಿಷೇಧ ವಿಧಿಸಬೇಕು ಎಂದು ತಿಳಿಸಿಲ್ಲವಾದರೂ, ಪಾರ್ಟಿ ನಡೆಸುವವರ ಬಗ್ಗೆ ಮೊದಲಾಗಿ ತಿಳಿದುಕೊಂಡು, ಗದ್ದಲಕ್ಕೆ ಆಸ್ಪದ ಇಲ್ಲದಂತೆ ಅವುಗಳನ್ನು ನಡೆಸಬೇಕು ಎಂದು ಸೂಚಿಸಿ ಈ ನೋಟಿಸ್ ಜಾರಿಗೊಳಿಸಲಾಗಿದೆ. ಸಹಜವಾಗಿಯೇ ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ತೀವ್ರ ತೊಡಕಾಗುವ ಸಾಧ್ಯತೆ ಇದೆ ಎಂದು ಪಣಂಬೂರು ಬೀಚ್ ಅಭಿವೃದ್ಧಿ ಸಂಸ್ಥೆಯ ಯತೀಶ್ ಬೈಕಂಪಾಡಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ವರ್ಗಾವಣೆ: ಈ ಮಧ್ಯೆ, ಹೋಂ ಸ್ಟೇ ದಾಳಿಗೆ ಪೊಲೀಸ್ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಇಬ್ಬರು ಅಧಿಕಾರಿಗಳ ವರ್ಗಾವಣೆಗೆ ದಾರಿಮಾಡಿಕೊಟ್ಟಿದೆ. ಮಂಗಳೂರು ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್ಪೆಕ್ಟರ್ ಸೋಮಯ್ಯ ಅವರನ್ನು ಪಣಂಬೂರು ಠಾಣೆಗೆ ಹಾಗೂ ಕಾನೂನು ಸುವ್ಯವಸ್ಥೆ ಸಬ್ ಇನ್ಸ್ಪೆಕ್ಟರ್ ಮುನಿಸ್ವಾಮಿ ಅವರನ್ನು ಬಂದರು ಠಾಣೆಗೆ ವರ್ಗಾಯಿಸಲಾಗಿದೆ.
ತೆರವಾದ ಈ ಎರಡು ಹುದ್ದೆಗಳಿಗೆ ಬಂದರು ಠಾಣೆಯ ಸುಧಾಕರ್ ಮತ್ತು ಮೂಲ್ಕಿ ಠಾಣೆಯ ಸುನಿಲ್ ಪಾಟೀಲ್ ಅವರನ್ನು ವರ್ಗಾಯಿಸಲಾಗಿದೆ. ಮೂಲ್ಕಿ ಠಾಣೆಗೆ ಪಣಂಬೂರು ಠಾಣೆಯಲ್ಲಿದ್ದ ಕೀರ್ತಿ ಕುಮಾರ್ ಅವರನ್ನು ವರ್ಗಾಯಿಸಲಾಗಿದೆ. ಎಸಿಪಿ ಟಿ.ಆರ್.ಜಗನ್ನಾಥ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ.
ಘಟನೆಯ ಹಲವು ಆಯಾಮ ನೋಡಿಕೊಂಡು ವಿಚಾರಣೆ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. `ಮಾರ್ನಿಂಗ್ ಮಿಸ್ಟ್~ ಹೋಂ ಸ್ಟೇ ಮಾಲಕಿ ಲೊರೆಟ್ಟಾ ರೆಬೆಲ್ಲೊ ಅವರು ತಮ್ಮ ಮನೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು, ಆಯೋಗದ ಅಧ್ಯಕ್ಷರು ಅಕ್ರಮ ಪ್ರವೇಶ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಪೊಲೀಸರು ಈ ಪ್ರದೇಶವನ್ನು ತಪಾಸಣೆಗೆ ಒಳಪಡಿಸಿದ ಬಳಿಕ ಸಮರ್ಪಕ ಸಾಕ್ಷ್ಯ ದೊರಕುವವರೆಗೆ ಅವರ ವಶದಲ್ಲೇ ಆ ಪ್ರದೇಶ ಇರುತ್ತದೆ. ಹೀಗಾಗಿ ಇಂತಹ ಆರೋಪ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.
ಹೋಂ ಸ್ಟೇ ಮಾಲಕಿಗೆ ಪಾಲಿಕೆ ನೀಡಿದ್ದ ಮೊದಲ ನೋಟಿಸ್ಗೆ ಉತ್ತರ ಬಂದಿದ್ದು, ತಾವು ಮನೆಯನ್ನು ಬಾಡಿಗೆಗೆ ಕೊಟ್ಟಿದ್ದಾಗಿ ತಿಳಿಸಿದ್ದಾರೆ. ಗಂಟೆಯ ಲೆಕ್ಕದಲ್ಲಿ ಬಾಡಿಗೆ ಪಡೆದ ಅವರು ಬಹಿರಂಗವಾಗಿಯೇ ತೆರಿಗೆ ವಂಚಿಸಿದ್ದನ್ನು ಒಪ್ಪಿಕೊಂಡಂತಾಗಿದ್ದು, ವಿವರಣೆಗೆ ಮತ್ತೊಂದು ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.