ಶ್ರೀನಿವಾಸಪುರ: ಈ ಬಾರಿ ಮಾವಿನ ಕಾಯಿ ಬೆಲೆ ಕುಸಿತ ಉಂಟಾಗಿ ರೈತರು ನಷ್ಟ ಅನುಭವಿಸಿದ್ದರೂ, ಮಾವಿನ ಬೆಳೆ ವಿಸ್ತರಣೆ ಮಾತ್ರ ಕಡಿಮೆಯಾಗಿಲ್ಲ. ಮಾವಿನ ಸಸಿ ನಾಟಿ ಮಾಡಲು ತೋಟಗಾರಿಕಾ ಇಲಾಖೆಯಿಂದ ದೊರೆಯುತ್ತಿರುವ ಪ್ರೋತ್ಸಾಹವು ವಿಸ್ತರಣೆಯ ವೇಗವನ್ನುಹೆಚ್ಚಿಸಿದೆ.
ಜಿಲ್ಲೆಗೆ ಹರಡುತ್ತಿದೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ ರೈತರು ಮಾವು ಬೆಳೆಯಲು ಮುಂದಾಗಿದ್ದಾರೆ. ಹಾಗಾಗಿ ಪಟ್ಟಣದ ಮಾವಿನ ಸಸಿ ಮಾರಾಟ ಮಳಿಗೆಗಳಿಂದ ಪ್ರತಿ ದಿನ ಸಾವಿರಾರು ಸಸಿಗಳು ಮಾರಾಟವಾಗುತ್ತಿವೆ. ದೂರದ ಪ್ರದೇಶಗಳಿಗೆ ವಿವಿಧ ವಾಹನಗಳಲ್ಲಿ ಸಸಿಗಳನ್ನು ಕೊಂಡೊಯ್ಯುವುದು ಸಾಮಾನ್ಯ ದೃಶ್ಯವಾಗಿದೆ. ಮಳೆಯಾದ ಸಂದರ್ಭದಲ್ಲಿ ಮಾವಿನ ಸಸಿಗಳಿಗೆ ಹೆಚ್ಚಿನ ಬೇಡಿಕೆ ಬರುತ್ತದೆ. ಸಸಿಗಳ ಬೆಲೆಯಲ್ಲಿಯೂ ಭಾರಿ ಏರಿಕೆಯಾಗಿದೆ.
ಕಾಯಿಯ ಬೆಲೆ ಎಷ್ಟಾದರೂ ಇರಲಿ ಮಾವಿನ ತೋಟ ಬೆಳೆಸಿದರೆ ಸಾಕು ಎಂಬ ತೀರ್ಮಾನಕ್ಕೆ ರೈತರು ಬಂದಿದ್ದಾರೆ. ಕೃಷಿ ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ಕೂಲಿ, ಕೃಷಿ ಉತ್ಪನ್ನಗಳಿಗೆ ಬೆಲೆ ಕುಸಿತ. ಕುಸಿಯುತ್ತಿರುವ ಅಂತರ್ಜಲ ಮಟ್ಟದ ಬೇಸತ್ತು ಹೆಚ್ಚಿನ ಕೃಷಿಕರು ಮಾವಿನತ್ತ ವಾಲಲು ಕಾರಣವಾಗಿದೆ.
ಸುಮಾರು ಹತ್ತು ವರ್ಷಗಳ ಕಾಲ ಮಾವಿನ ಗಿಡಗಳ ನಡುವೆಯೇ ವ್ಯವಸಾಯ ಮಾಡಬಹುದು. ಈಗಲೂ ತಾಲ್ಲೂಕಿನ ಬಹುತೇಕ ವ್ಯವಸಾಯ ಮಾವಿನ ತೋಟಗಳಲ್ಲಿಯೇ ನಡೆಯುತ್ತಿದೆ. ಟೊಮೆಟೊ, ಹಿಪ್ಪುನೇರಳೆ ಹಾಗೂ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದೆ.
ತಾಲ್ಲೂಕಿನ ದಕ್ಷಿಣ ಭಾಗದ ಬಯಲು ಪ್ರದೇಶಕ್ಕೆ ಸೀಮಿತವಾಗಿದ್ದ ಮಾವು ಈಗ ಉತ್ತರದ ಗಡಿ ಪ್ರದೇಶದ ಗುಡ್ಡಗಾಡಿಗೂ ವಿಸ್ತರಣೆಯಾಗಿದೆ. ಫಲವತ್ತಾದ ಜಮೀನುಗಳಲ್ಲಿ ಮಾವಿನ ಸಸಿ ವಿಜೃಂಭಿಸುತ್ತಿವೆ.
ನೀರಾವರಿ, ಮಳೆ ಆಶ್ರಯದ ಹೊಲ ಗದ್ದೆಗಳನ್ನೂ ಮಾವು ಪ್ರವೇಶಿಸಿದೆ. ಒಟ್ಟಾರೆ ಮಾವಿನ ಬೆಳೆಯಲ್ಲಿ ಭವಿಷ್ಯವನ್ನು ಕಂಡುಕೊಳ್ಳುವ ಹಂಬಲ ಹೆಚ್ಚಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.