ಚಿತ್ರದುರ್ಗ: ತಾಲ್ಲೂಕಿನ ಹಿರೇಗುಂಟ ನೂರು ಹೋಬಳಿಯ ಭೀಮಸಮುದ್ರ ಮಜುರೆಯ ಬಸವಾಪುರದ ಮಾವಿನ ಹಳ್ಳಿ ಬಸವೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಶುಕ್ರವಾರ ದೇವಾಲಯದ ಆವರಣದಲ್ಲಿ ಕೆಂಡಾರ್ಚನೆ ನಡೆಯಿತು.
ಫೆ. 28ರಿಂದಲೇ ಸ್ವಾಮಿಯ ರಥೋತ್ಸವದ ಅಂಗವಾಗಿ ಪ್ರತಿದಿನ ಅಶ್ವೋತ್ಸವ, ವೃಷಭೋತ್ಸವಗಳು ನಡೆದವು. ಶುಕ್ರವಾರ ಬೆಳಿಗ್ಗೆ ಭಕ್ತರು ಸ್ವಾಮಿಗೆ ಹೂವಿನ ಸೇವೆ ಸಲ್ಲಿಸಿ, ಗಜೋತ್ಸವ ಸೇವೆ ನಡೆಸಿದರು. ನಂತರ ಕೆಂಡಾರ್ಚನೆ ನೇರವೇರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತ ಸಮೂಹವೇ ಸೇರಿತ್ತು. ಪಲ್ಲಕ್ಕಿಯಲ್ಲಿ ಸ್ವಾಮಿಯ ಮೂರ್ತಿಯನ್ನು ಕೂರಿಸಿ ಅದರೊಂದಿಗೆ ಕೆಂಡದ ಮೇಲೆ ನಡೆಯುವ ಮೂಲಕ ಭಕ್ತಿ ಪ್ರದರ್ಶಿಸಿದರು.
ಮಾರ್ಚ್ 3ರಂದು ರಥೋತ್ಸವ, ಸಾಮೂಹಿಕ ವಿವಾಹ ಮತ್ತು ಧಾರ್ಮಿಕ ಸಭೆ ಹಾಗೂ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಿಗ್ಗೆ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಮಧ್ಯಾಹ್ನ 2.30ರಿಂದ ಧಾರ್ಮಿಕ ಸಭೆ ಮತ್ತು ಸನ್ಮಾನ ಹಮ್ಮಿಕೊಳ್ಳಲಾಗಿದೆ. ನಂತರ ಸ್ವಾಮಿಯ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.
ಮುರುಘಾ ಮಠದ ಶಿವಮೂರ್ತಿ ಶರಣರು ನೇತೃತ್ವ ವಹಿಸಲಿದ್ದಾರೆ. ದಾವಣಗೆರೆ ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ ಕಾರ್ಯಕ್ರಮ ಉದ್ಘಾಟಿ ಸಲಿದ್ದಾರೆ. ಮಾವಿನಹಳ್ಳಿ ದೇವಸ್ಥಾನ ದಿಂದ ಬಿ. ದುರ್ಗ ಮತ್ತು ಭೀಮ ಸಮುದ್ರ ಕೂಡುವ ರಸ್ತೆಯನ್ನು ನೂತನ ವಾಗಿ ನಿರ್ಮಿಸಲಾಗಿದ್ದು, ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವರಾದ ಜಗದೀಶ್ ಶೆಟ್ಟರ್ ಉದ್ಘಾಟಿಸಲಿದ್ದಾರೆ ಎಂದು ಮಾವಿನಹಳ್ಳಿ ಬಸವೇಶ್ವರ ಸ್ವಾಮಿ ಟ್ರಸ್ಟ್ ಪದಾಧಿಕಾರಿಗಳು ತಿಳಿದ್ದಾರೆ.
ದೇವಾಲಯದ ಆವರಣ ದಲ್ಲಿ ನೂತನವಾಗಿ ನಿರ್ಮಿಸಿರುವ ಭೋಜನ ಶಾಲೆಯನ್ನು ವಸತಿ ಸಚಿವ ವಿ. ಸೋಮಶೇಖರ್ ಹಾಗೂ ಸಮುದಾಯ ಭವನದ 12 ಕೊಠಡಿಗಳ ಶಂಕುಸ್ಥಾಪನೆಯನ್ನು ಅಬಕಾರಿ ಸಚಿವ ರೇಣಕಾಚಾರ್ಯ ನೇರವೇರಿಸಲಿದ್ದಾರೆ. ನೂತನವಾಗಿ ನಿರ್ಮಾಣವಾಗಿರುವ 5 ಕೊಠಡಿಗಳನ್ನು ಶಾಸಕ ಬಸವರಾಜನ್ ಉದ್ಘಾಟಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.