ADVERTISEMENT

ಮಿತ ಸಂತಾನ ಸೂತ್ರ ಪಾಲಿಸಲು ಶ್ರೀಗಳ ಸಲಹೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2012, 19:30 IST
Last Updated 6 ಏಪ್ರಿಲ್ 2012, 19:30 IST

ಕುಷ್ಟಗಿ: ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಅಭಿವೃದ್ಧಿ ಕುಂಠಿತಗೊಳ್ಳುವುದಲ್ಲದೇ ಮೂಲಸೌಕರ್ಯಗಳ ಅಭಾವವೂ ಎದುರಾಗಿ ಜನಜೀವನ ಅಸ್ತವ್ಯಸ್ತಗೊಳ್ಳುತ್ತದೆ. ಜನಸಂಖ್ಯೆ ಭಾರ ತಗ್ಗಿಸುವುದಕ್ಕೆ ಪ್ರತಿಯೊಬ್ಬರೂ ಮಿತ ಸಂತಾನ ಹೊಂದುವುದು ದೇಶದ ಹಿತದೃಷ್ಟಿಯಿಂದ ಅತ್ಯವಶ್ಯ ಎಂದು ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ ಕರೆ ನೀಡಿದರು.

ತಾಲ್ಲೂಕಿನ ಹಿರೇಮನ್ನಾಪೂರ ಗ್ರಾಮದಲ್ಲಿ ಶುಕ್ರವಾರ ಕಾಶಿವಿಶ್ವನಾಥ ಜಾತ್ರಾ ಮಹೋತ್ಸವ ಹಾಗೂ ಶರಣಬಸವೇಶ್ವರರ ಪುರಾಣ ಮಹಾಮಂಗಲದ ಅಂಗವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನವ ವಿವಾಹಿತರನ್ನು ಆಶೀರ್ವದಿಸಿದರು.

 ಧಾರ್ಮಿಕ, ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆ ಪ್ರತಿಯೊಬ್ಬರ ಸುಮಧುರ ದಾಂಪತ್ಯ ಬದುಕನ್ನು ಅವಲಂಬಿಸಿರುತ್ತದೆ. ಹಸಿದವರಿಗೆ ಅನ್ನ ನೀಡುವ ಶರಣರ ದಾಸೋಹದ ಮಹತ್ವವನ್ನು ಅರಿಯುವಂತೆ ಅವರು ಸಲಹೆ ನೀಡಿದರು.

28 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಬೆಳಿಗ್ಗೆ ಗ್ರಾಮದ ಕಾಶಿವಿಶ್ವನಾಥ ದೇವರಿಗೆ ವಿಶೇಷ ಪೂಜೆ, ಕರಿಬಸವ ಶ್ರೀಗಳ ತುಲಾಭಾರ ನೆರವೇರಿದವು.ಚಳಗೇರಿಯ ವಿರುಪಾಕ್ಷಲಿಂಗ ಶಿವಾಚಾರ್ಯ, ಕೊತಬಾಳದ ಗಂಗಾಧರ ಸ್ವಾಮೀಜಿ, ನೀಲಕಂಠಯ್ಯ ತಾತನವರು ಮಂಗಳೂರಿನ ಸಿದ್ಧಲಿಂಗ ಸ್ವಾಮೀಜಿ, ಬಸವಲಿಂಗೇಶ್ವರ ಸ್ವಾಮೀ ಜಿ, ಸಜ್ಜಲಗುಡ್ಡದ ದೊಡ್ಡಬಸವಾರ್ಯ ಸ್ವಾಮೀ ಜಿ ಇತರರು ಸಾನ್ನಿಧ್ಯ ವಹಿಸಿದ್ದರು.

ಶಾಸಕ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಹಸನ್‌ಸಾಬ್ ದೋಟಿಹಾಳ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದೊಡ್ಡಯ್ಯ ಗದ್ದಡಕಿಮಠ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಮೀದಸಾಬ ಬ್ಯಾಲಿಹಾಳ, ಸಬ್ ಇನ್‌ಸ್ಪೆಪೆಕ್ಟರ್ ನಾರಾಯಣ ದಂಡಿನ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.