ADVERTISEMENT

ಮೂಡಿಗೆರೆ: ಮಳೆಯಿಂದ ಅಪಾರ ಹಾನಿ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2011, 19:30 IST
Last Updated 7 ಆಗಸ್ಟ್ 2011, 19:30 IST
ಮೂಡಿಗೆರೆ: ಮಳೆಯಿಂದ ಅಪಾರ ಹಾನಿ
ಮೂಡಿಗೆರೆ: ಮಳೆಯಿಂದ ಅಪಾರ ಹಾನಿ   

ಮೂಡಿಗೆರೆ: ತಾಲ್ಲೂಕಿನಾದ್ಯಂತ ಆಶ್ಲೇಷ ಮಳೆ ಇತ್ತೀಚೆಗೆ ಧಾರಾಕಾರವಾಗಿ ಸುರಿಯುತ್ತಿದೆ. ಹೇಮಾವತಿ ಹಾಗೂ ಇತರೆ ಚಿಕ್ಕ ಪುಟ್ಟ ಹಳ್ಳ ಕೊಳ್ಳಗಳು ತುಂಬಿರಿಯುತ್ತಿದ್ದು, ಕೆಲವು ಗ್ರಾಮಗಳಲ್ಲಿ ರಸ್ತೆ ಸೇತುವೆ ಮೇಲೆ ಮಳೆ ನೀರು ಹರಿಯುತ್ತಿರುವುದರಿಂದ ರಸ್ತೆ ದಾಟಲು ಜನ ಹರಸಾಹಸ ಪಡಬೇಕಾಗಿದೆ.

ಮಳೆಯಿಂದ ಗ್ರಾಮಾಂತರ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ರಸ್ತೆ ಸೇತುವೆ ಕೊಚ್ಚಿಹೋಗಿವೆ. ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ ಮತ್ತು ಲೋಕೋಪಯೋಗಿ ಇಲಾಖೆ ವತಿಯಿಂದ ಈಗಾಗಲೆ ಹಾನಿ ಪ್ರಮಾಣ ಅಂದಾಜಿಸಿ ಸರ್ಕಾರಕ್ಕೆ ವಿವರ ವರದಿ ಕಳುಹಿಸಲಾಗಿದೆ.

ತಾಲ್ಲೂಕಿನಲ್ಲಿ ಪಶ್ವಿಮಘಟ್ಟ ಅತಿವೃಷ್ಟಿ ಪೀಡಿತ ಪ್ರದೇಶಗಳಾದ ದೇವವೃಂದ, ಊರುಬಗೆ, ಮೇಕನಗದ್ದೆ, ಬೈರಾಪುರ, ಹೊಸಕೆರೆ, ಹಳ್ಳಿಬೈಲು, ಮೂಲರಹಳ್ಳಿ, ಗುತ್ತಿಹಳ್ಳಿ, ಹೆಸಗೋಡು, ದೇವರಮನೆ, ಕೋಗಿಲೆ, ತರುವೆ, ಆಲೇಖಾನ್, ಮುದುಗುಂಡಿ ಹಾಗೂ ಇತರೆ ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಭತ್ತದ ನಾಟಿ ಕೊಚ್ಚಿಹೋಗಿದ್ದು, ಎರಡನೇ ಬಾರಿ ನಾಟಿ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ.

ತಾಲ್ಲೂಕಿನಲ್ಲಿ ಕಂದಾಯ ಇಲಾಖೆ ಮಾಹಿತಿಯಂತೆ 80ಕ್ಕೂ ಹೆಚ್ಚಿನ ಮನೆ ಕುಸಿದಿವೆ. ಶಿಕ್ಷಣ ಇಲಾಖೆ ಅಂದಾಜಿಸಿರುವಂತೆ 10ಕ್ಕೂ ಹೆಚ್ಚನ ಶಾಲೆಗಳಿಗೆ ಹಾನಿ ಸಂಭವಿಸಿದೆ.

ಕೃಷಿ, ತೋಟಗಾರಿಕೆ, ಜಲಾನಯನ ಹಾಗೂ ಇತರೆ ಇಲಾಖೆಗಳು ಮಳೆಯಿಂದ ಹಾನಿಯಾಗಿರುವ ಬಗ್ಗೆ ಸಮೀಕ್ಷೆಯನ್ನು ನಡೆಸುತ್ತಿವೆ. ತಾಲ್ಲೂಕಿನಲ್ಲಿ ಮಳೆಯಿಂದ ಭಾರಿ ಹಾನಿ ಸಂಭವಿಸಿದ್ದು. ಎಲ್ಲ ಇಲಾಖೆಗಳಿಗೆ ಮಾಹಿತಿ ಪಡೆದು ಶಾಸಕರಿಗೆ ಮತ್ತು ಸರ್ಕಾರಕ್ಕೆ ವಿವರವಾದ ವರದಿಯನ್ನು ಸದ್ಯದಲ್ಲಿ ನೀಡಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಅಜಿತ್ ಕುಮಾರ್ ರಂಜನ್ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.