ADVERTISEMENT

ಯಗಚಿ ಜಲಾಶಯಕ್ಕೆ ನಗರಸಭಾಧ್ಯಕ್ಷರ ಭೇಟಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಬೇಲೂರು: ಕಾವೇರಿ ಹೋರಾಟಕ್ಕೆ ಚಿಕ್ಕಮಗಳೂರು ಜಿಲ್ಲೆಯ ಜನರೂ ಬೆಂಬಲ ನೀಡಬೇಕು ಎಂದು ಒತ್ತಡ ಹೇರುವ ಉದ್ದೇಶದಿಂದ ಶನಿವಾರ ಬೇಲೂರಿನ ಪ್ರತಿಭಟನಾಕಾರರು ಯಗಚಿ ಜಲಾಶಯದಿಂದ ಚಿಕ್ಕಮಗಳೂರಿಗೆ ಹೋಗುತ್ತಿದ್ದ ನೀರನ್ನು ಸ್ಥಗಿತಗೊಳಿಸಿದ್ದು ಸರಿಯಲ್ಲ ಎಂದು ಚಿಕ್ಕಮಗಳೂರು ನಗರಸಭೆ ಅಧ್ಯಕ್ಷ ಸಿ.ಆರ್. ಪ್ರೇಮ್‌ಕುಮಾರ್ ಹೇಳಿದರು.

ಭಾನುವಾರ ಸದಸ್ಯರೊಂದಿಗೆ ಜಾಕ್‌ವೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

`ಯಗಚಿ ಅಣೆಕಟ್ಟೆಯಿಂದ ನೀರು ಹರಿಸುತ್ತಿರುವ ವಿಚಾರ ತಿಳಿದ ಕೂಡಲೇ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ, ಮುಖ್ಯಮಂತ್ರಿ ಮತ್ತು ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತುಕತೆ ನಡೆಸಿದ್ದೆವು. ಇದರಿಂದಾಗಿ ಯಗಚಿಯಿಂದ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿದೆ~ ಎಂದರು.

ತಮಿಳುನಾಡಿಗೆ ನೀರು ಬಿಟ್ಟರೆ  ಚಿಕ್ಕಮಗಳೂರಿನ ಜನಪ್ರತಿನಿಧಿಗಳು ಪ್ರತಿಭಟನೆ ನಡೆಸಬೇಕಾಗುತ್ತದೆ~ ಎಂದು ಎಚ್ಚರಿಸಿದರು. ುಗಚಿ ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟೇಗೌಡ ಅವರೊಂದಿಗೂ ಮಾತುಕತೆ ನಡೆಸಿದರು.

ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಪ್ಪ, ನಗರಸಭೆ ಸದಸ್ಯರಾದ ತಮ್ಮಯ್ಯ, ಲಿಂಗಣ್ಣ, ಶ್ರೀನಿವಾಸ್, ಬಿಜೆಪಿ ಮುಖಂಡ ವರಸಿದ್ದಿ ವೇಣುಗೋಪಾಲ್, ಬೇಲೂರು ಪುರಸಭೆ ಸದಸ್ಯರಾದ ಎಚ್.ಎಂ.ದಯಾನಂದ್, ಬಿ.ಎ.ಜಮಾಲುದ್ದೀನ್, ಸಂಘಟನೆಗಳ ಮುಖಂಡರಾದ ಕೆ.ಸುದರ್ಶನ್, ಬಿ.ಆರ್.ತೀರ್ಥಂಕರ್, ಚಂದ್ರಶೇಖರ್, ಭಾರತಿಗೌಡ, ಜುಬೇರ್ ಅಹಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.