ADVERTISEMENT

ಯಶಸ್ವಿ ಜೀವನಕ್ಕೆ ಸಂಸ್ಕಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ವಿಜಾಪುರ: `ವಿವಾಹವೆಂದರೆ ಗಂಡು-ಹೆಣ್ಣು ಒಟ್ಟಿಗೆ ಸೇರಿ ಹೇಗೋ ಬದುಕುವುದಲ್ಲ. ಅದೊಂದು ಸಾಮಾಜಿಕ ಹೊಣೆಗಾರಿಕೆ. ನಮ್ಮನ್ನು ನಾವು ಅರಿತು ಜವಾಬ್ದಾರಿಯಿಂದ ಬದುಕುವ ಪದ್ಧತಿ~ ಎಂದು ವಿಜಾಪುರ-ಗದಗ ರಾಮಕೃಷ್ಣ ವಿವೇಕಾನಂದ ಆಶ್ರಮದ ನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಕತಕನಹಳ್ಳಿ ಗ್ರಾಮದಲ್ಲಿ ಗುರುಚಕ್ರವರ್ತಿ ಸದಾಶಿವ ಜಾತ್ರೆಯ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಮಹೋತ್ಸವದ  ಸಾನ್ನಿಧ್ಯ ವಹಿಸಿ ಮಾತನಾಡಿದರು.

`ನವ ವಿವಾಹಿತರು ಸಂಸ್ಕಾರಯುತ ಜೀವನ ನಡೆಸಿ, ಜೀವನ ಸಾರ್ಥಕ ಮಾಡಿಕೊಳ್ಳಬೇಕು. ಯಶಸ್ವಿ ಜೀವನಕ್ಕೆ ಸಂಸ್ಕಾರ ಅತ್ಯಗತ್ಯ. ಸನ್ಮಾರ್ಗದಲ್ಲಿ ನಡೆದು ಈ ದೇಶವನ್ನು ಸ್ವರ್ಗವನ್ನಾಗಿಸಲು ಎಲ್ಲರೂ ಶ್ರಮಿಸಬೇಕು~ ಎಂದರು.

ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ  56 ಜೋಡಿಗಳನ್ನು ಕತಕನಹಳ್ಳಿ ಸದಾಶಿವ ಮಠದ ಶಿವಯ್ಯ ಸ್ವಾಮೀಜಿ ಆಶೀರ್ವದಿಸಿದರು.

ಶಾಸಕರಾದ ಅಪ್ಪು ಪಟ್ಟಣಶೆಟ್ಟಿ, ಎಂ.ಬಿ. ಪಾಟೀಲ, ವಿಠ್ಠಲ ಕಟಕಧೋಂಡ, ಮುಖಂಡರಾದ ಬಾಬುಗೌಡ ಬಿರಾದಾರ, ವಿಜಯಕುಮಾರ ಪಾಟೀಲ, ಎಸ್.ಎಂ. ಪಾಟೀಲ ಗಣಿಹಾರ, ಸಂಗಮೇಶ ಬಬಲೇಶ್ವರ, ಸುನೀಲ್ ಪಾಟೀಲ, ಈರಣ್ಣ ಪಟ್ಟಣಶೆಟ್ಟಿ, ಗಿರಿಧರ ರಾಜು ಇತರರು ಈ ಸಂದರ್ಭದಲ್ಲಿದ್ದರು.

ಜಾತ್ರೆಗೆ ಆಗಮಿಸಿದ್ದ ಸಹಸ್ರಾರು ಭಕ್ತರು ಮಾದಲಿ, ಸಜ್ಜೆ ರೊಟ್ಟಿ, ಅನ್ನ-ಸಾರು ಸವಿದರು.

ರಾತ್ರಿ ಸಾರವಾಡದ ಬಸವೇಶ್ವರ ನಾಟ್ಯ ಸಂಘದವರಿಂದ `ಸಂಗ್ಯಾ ಬಾಳ್ಯಾ~ ನಾಟಕ, ಸಾಲೋಟಗಿಯ ಶಿವಯೋಗೇಶ್ವರ ಭಜನಾ ಮಂಡಳಿ ಹಾಗೂ ಹಡಲಗೇರಿಯ ಹುಲಿಗೆಮ್ಮದೇವಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಜರುಗಿತು.

ಜಾತ್ರೆಯ ಅಂಗವಾಗಿ ಜಾನುವಾರುಗಳ ಪ್ರದರ್ಶನ ಹಾಗೂ ಮಾರಾಟವೂ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.