ಮದ್ದೂರು: ರೇಷ್ಮೆ ಕೃಷಿಯಲ್ಲಿ ನಷ್ಟಕ್ಕೆ ಒಳಗಾದ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಮೀಪದ ರಾಂಪುರದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಗ್ರಾಮದ ಚಿನ್ನೇಗೌಡರ ಮಗ ಸ್ವಾಮಿ (36) ಆತ್ಮಹತ್ಯೆ ಮಾಡಿಕೊಂಡವರು. ಇವರು ರೇಷ್ಮೆ ಕೃಷಿಗಾಗಿ ಪಿಎಲ್ಡಿ ಬ್ಯಾಂಕಿನಲ್ಲಿ ರೂ. 1.24 ಲಕ್ಷ, ಬೆಳತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೂ. 46 ಸಾವಿರ, ವಿಜಯ ಬ್ಯಾಂಕ್ನಲ್ಲಿ ಬೆಳೆ ಸಾಲ 10 ಸಾವಿರ ರೂಪಾಯಿ ಪಡೆದಿದ್ದರು. ಇದಲ್ಲದೇ ರೇಷ್ಮೆ ಸಾಕಾಣಿಕೆ ಮನೆ ನಿರ್ಮಾಣಕ್ಕೆ ಬ್ಯಾಂಕಿನಿಂದ ಸಾಲ ತೆಗೆದುಕೊಂಡಿದ್ದರು. 3 ಲಕ್ಷ ರೂಪಾಯಿ ಖಾಸಗಿ ಸಾಲವನ್ನೂ ಮಾಡಿದ್ದರು.
ನಿರಂತರ ರೇಷ್ಮೆ ಬೆಳೆ ನಷ್ಟದಿಂದಾಗಿ ಸ್ವಾಮಿ ಕೆಲವು ತಿಂಗಳುಗಳಿಂದ ಬೇಸತ್ತಿದ್ದರು. ಪೂರ್ಣಗೊಳ್ಳದ ಸಾಕಾಣಿಕೆ ಮನೆ ನಿರ್ಮಾಣ, ಹೆಚ್ಚಿದ ಸಾಲಗಾರರ ಒತ್ತಡದಿಂದ ಮಂಗಳವಾರ ಮಧ್ಯಾಹ್ನ ಮನೆಗೆ ಬಂದವರು ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು ಎನ್ನಲಾಗಿದೆ.
ಇವರಿಗೆ ಪತ್ನಿ, ಒಬ್ಬ ಮಗ, ಒಬ್ಬಳು ಮಗಳು ಇದ್ದಾರೆ. ತಹಶೀಲ್ದಾರ್ ನಾಗರಾಜು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.